ನವದೆಹಲಿ : ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದ್ದು, ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಸಿಸೋಡಿಯಾರನ್ನು ಈಗಾಗಲೇ ತಿಹಾರ್ ಜೈಲಿಗೆ ಕರೆದೊಯ್ಯಲಾಗಿದ್ದು, ಅವರನ್ನು ನಂ. 1 ಜೈಲಿನಲ್ಲಿ ಇರಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ.
ಮದ್ಯ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ಇದೀಗ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ ಸಿಸೋಡಿಯಾ ಅವರಿಗೆ ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ತಿಹಾರ್ ಜೈಲಿಗೆ ಕಳುಹಿಸಿದೆ.ಇಡೀ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ನನಗೆ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಇದು ನನಗೆ ಮಾನಸಿಕ ಕಿರುಕುಳವಾಗಿದೆ’ ಎಂದು ಸಿಸೋಡಿಯಾ ಅವರ ಸಿಬಿಐ ಬಂಧನವನ್ನು ಎರಡು ದಿನಗಳವರೆಗೆ ವಿಸ್ತರಿಸಿದ ಕೂಡಲೇ ಹೇಳಿದ್ದರು. ನ್ಯಾಯಾಲಯವು ಈ ಹಿಂದೆ ಅನುಮತಿಸಿದ್ದ 7 ದಿನಗಳ ಕಸ್ಟಡಿ ವಿಚಾರಣೆಯ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಎಎಪಿ ನಾಯಕ ಸಿಸೋಡಿಯಾ ಅವರ ವೈದ್ಯಕೀಯ ಪರೀಕ್ಷೆಯ ವೇಳೆ ಸೂಚಿಸಿದ ಔಷಧಗಳನ್ನು ಕೊಂಡೊಯ್ಯಲು ಕೋರ್ಟ್ ಅನುಮತಿ ನೀಡಿದೆ. ಒಂದು ಜೊತೆ ಕನ್ನಡಕ, ಡೈರಿ, ಪೆನ್ನು ಮತ್ತು ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ಯಲು ಸಹ ಅನುಮತಿ ನೀಡಲಾಗಿದೆ. ಸಿಸೋಡಿಯಾ ಅವರ ವಕೀಲರ ಕೋರಿಕೆಯಂತೆ, ಅವರನ್ನು ಮೆಡಿಟೇಶನ್ ಸೆಲ್ನಲ್ಲಿ ಇರಿಸುವ ಕೋರಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.