ಮಂಡ್ಯ: ಮಂಡ್ಯ ಮತ್ತು ಹಳೇ ಮೈಸೂರು ಭಾಗದಲ್ಲಿ ಶತಾಯಗತಾಯ ಕಮಲ ಅರಳಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಇದೇ ಡಿಸೆಂಬರ್ 30ಕ್ಕೆ ಮಂಡ್ಯದಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ.
ಕರ್ನಾಕಟದಲ್ಲಿ ಹಳೆ ಮೈಸೂರು ಭಾಗ ಜೆಡಿಎಸ್ನ ಭದ್ರಕೋಟೆಯಾಗಿದ್ದು, ಪ್ರಮುಖ ರಾಜಕೀಯ ಜಿದ್ದಾಜಿದ್ದಿನ ಜಿಲ್ಲೆಯಾದ ಮಂಡ್ಯ ಜಿಲ್ಲೆಯಲ್ಲಿ 5 ರಿಂದ 6 ಕ್ಷೇತ್ರಗಳನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದು ಈ ಸಮಾವೇಶಕ್ಕೆ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಡಿಸೆಂಬರ್ 30ರಂದು ಮನ್ಮುಲ್ನ ಮೆಗಾ ಡೈರಿ ಉದ್ಘಾಟನೆಯನ್ನು ಅಮಿತ್ ಶಾ ಮಾಡಲಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಬರುತ್ತಿರುವ ಅಮಿತ್ ಶಾ ಪಕ್ಷದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.
ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಕನಿಷ್ಠ ಐದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೈಕಮಾಂಡ್ನಿಂದ ರಾಜ್ಯದ ನಾಯಕರಿಗೆ ಸೂಚನೆ ಬಂದಿದೆ. ಈ ಕಾರಣದಿಂದ ರಾಜ್ಯದ ನಾಯಕರು ಮಂಡ್ಯ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮಂಡ್ಯದ ಬಾಲಕರ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಒಂದು ಲಕ್ಷ ಜನರನ್ನು ಸೇರಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಈ ಸಮಾವೇಶದ ನಂತರ ಮಂಡ್ಯದಲ್ಲೇ ಅಮಿತ್ ಶಾ ಸಭೆ ನಡೆಸಿ ಚುನಾವಣೆ ತಂತ್ರವನ್ನು ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.