ಬೆಂಗಳೂರು : ಬೆಂಗಳೂರು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಗೆ ಆರೋಪಿ ನಾಗೇಶ್ ಆ್ಯಸಿಡ್ ಎರಚಿದ್ದ, ತಲೆ ಮರೆಸಿಕೊಂಡಿದ್ದ ನಾಗೇಶನ ಕಾಲಿಗೆ ಗುಂಡು ಹಾರಿಸುವ ಮೂಲಕ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ಜೈಲಿನಲ್ಲಿರುವ ನಾಗೇಶನಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜೈಲಾಧಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಗ್ಯಾಂಗ್ರಿನ್ ಲಕ್ಷಣಗಳು ಕಂಡು ಬಂದಿದ್ದು,ನಡೆದಾಡಲು ಆಗದೇ ವಿಕ್ಟೋರಿಯಾ ಆಸ್ಪತ್ರೆ ಮತ್ತು ಜೈಲಿನ ಆಸ್ಪತ್ರೆಯ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇತ್ತ ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಆರೋಪಿ ನಾಗೇಶ್ ಏಪ್ರಿಲ್ 28ರಂದು ಸುಂಕದ ಕಟ್ಟೆಯ ಫೈನಾನ್ಸ್ ಬಳಿ 25 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ತಿರುವಣ್ಣಾಮಲೈ ರಮಣ ಆಶ್ರಮದಲ್ಲಿ ಸ್ವಾಮೀಜಿ ವೇಷಧಾರಿಯಾಗಿದ್ದ ನಾಗೇಶ್ನನ್ನು ಮೇ 13ರಂದು ಪೊಲೀಸರು ಬಂಧಿಸಿದ್ದರು.