ಮೈಸೂರು: ಇತಿಹಾಸವೇ ಇಲ್ಲದವರಿಂದ ಹಾಗೂ ಇತಿಹಾಸದ ಮಹತ್ವವೇ ಗೊತ್ತಿಲ್ಲದವರಿಂದ ಇಂದು ಇತಿಹಾಸ ತಿರುಚುವ ಕೆಲಸವಾಗುತ್ತದೆ. ಇದು ಹೆಚ್ಚು ದಿನ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.
ಭೀಮಾ ಕೋರೆಗಾಂವ್ 205ನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿ, ಇತಿಹಾಸ ಇಲ್ಲದವರಿಗೆ ಭವಿಷ್ಯ ಇರಲ್ಲ. ಪ್ರಪಂಚದ ಬಲಪಂಥೀಯರಿಗೆ ಇತಿಹಾಸವೇ ಇಲ್ಲ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತು ಸತ್ಯ. ಸುಳ್ಳು ಎಂಬುದು ಒಂದು ರೀತಿ ಅಯಸ್ಕಾಂತವಿದ್ದಂತೆ, ಆದ್ದರಿಂದಲೇ ಜನ ಬೇಗ ಸುಳ್ಳನ್ನು ನಂಬುತ್ತಾರೆ. ಆದರೆ, ಸತ್ಯ ಬೆಳಕಿಗೆ ಬರಲಿದೆ ಎಂದರು.
ದೇಶಕ್ಕೆ ಇತಿಹಾಸ ಬಹಳ ಮುಖ್ಯ ಎಂಬುದು ಇಂದಿನ ಆಳುವ ಎಡಬಿಡಂಗಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದಲೇ ವಾಟ್ಸ್ಆ್ಯಪ್ ಯೂನಿವರ್ಸಿಟಿಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಾ, ನಿಜ ಚರಿತ್ರೆಯನ್ನು ತಿರುಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.
ದೇಶಕ್ಕೆ ಇಂತಹ ಸಂಘಟನೆಗಳು ಅಪಾಯಕಾರಿ. ಇವರ ಕಾಗಕ್ಕ ಗುಬಕ್ಕ ಕಥೆಗಳನ್ನು ಜನರು ನಂಬುವುದಿಲ್ಲ. ಗೋ ಮೂತ್ರ ಕುಡಿದರೆ ಪವಿತ್ರವಾಗುತ್ತಾರೆ ಎಂದು ಹೇಳುವವರು ಕುಡಿದು ತೋರಿಸಲಿ. ಜೈ ಭೀಮ್ ಅಸ್ಮಿತೆಯುಳ್ಳವರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ತಿರುಗೇಟು ಕೊಟ್ಟರು.