ವಿಜಯಪುರ: ಕೂಡಲ ಸಂಗಮ ಸ್ವಾಮೀಜಿ ಬಿಟ್ಟರೆ ಉಳಿದ ನಮ್ಮ ಸಮಾಜದ ಇತರೆ ಸ್ವಾಮೀಜಿಗಳು ಬುಕ್ಕಿಂಗ್ ಸ್ವಾಮೀಜಿಗಳು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂಡಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಮೀಸಲಾತಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟವರು ಕೂಡಲಸಂಗಮ ಶ್ರೀಗಳು. ಉಳಿದವರೆಲ್ಲಾ ಬುಕ್ಕಿಂಗ್ ಸ್ವಾಮಿಗಳು, ಅವರೆಲ್ಲಾ ದುಡ್ಡು ಮಾಡ್ಕೊಂಡು ಶ್ರೀ ಗುರು ಬಸವಲಿಂಗಾಯ ನಮಃ ಅಂತಾರೆ. ಫೈವ್ ಸ್ಟಾರ್ ಹೊಟೇಲ್ ತರಹ ಮಠ ಕಟ್ಟಿಕೊಂಡು ಕುಳಿತಿದ್ದಾರೆ. ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುತ್ತದೆ ಎಂದು ತಿಳಿದು ನಮಗಿನ್ನು ಉಳಿಗಾವಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಈಗ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ಗದಗ ಪ್ರವಾಸ ಮಾಡುತ್ತೇವೆ. ಹರಿಹರದಲ್ಲಿ ಸಭೆಯನ್ನು ಮಾಡುತ್ತೇವೆಂದು ಹೇಳುತ್ತಿದ್ದಾರೆಂದು ಪರೋಕ್ಷವಾಗಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ವಿರುದ್ದ ಕಿಡಿಕಾಡಿದ್ರು. ಇನ್ನು ಪಂಚಮಸಾಲಿ ಹಿಂದುಳಿದ ಜಾಗೃತಿ ಸಭೆ ಮಾಡುತ್ತೇವೆ ಎನ್ನುತ್ತಿದ್ದಾರೆ ಅದು ನಮಗೆ ಗೊತ್ತಿಲ್ವಾ. ನಾವೇನು ಹುಚ್ಚನಾ? ನಿಮ್ಮೊಳಗೆ ನರನಾಡಿ ಎಷ್ಟಿವೆ ಎಂಬುದು ನಮ್ಮ ಹುಡುಗರಿಗೆ ಗೊತ್ತಿದೆ. ಇದರ ಹಿಂದೆ ಒಬ್ಬನಿದ್ದಾನೆ, ರೊಕ್ಕಾ ಕೊಡುತ್ತಾರೆ. ಇವರು ಜಾಗೃತಿ ಸಭೆ ಮಾಡುತ್ತಾರೆ ಎಂದು ವಚನಾನಂದ ಸ್ವಾಮೀಜಿ ಜೊತೆಗೆ ಸಚಿವ ಮುರುಗೇಶ ನಿರಾಣಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ರು.
2023ರ ವಿಧಾನಸಭಾ ಚುನಾವಣೆಗೆ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಹಾಗೂ ನಗರ ಶಾಸಕ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ನಡುವೆ ವಾಕ್ಸಮರ ನಡೆದಿದೆ. ವಿಜಯಪುರ ನಗರ ಕ್ಷೇತ್ರದಿಂದ ಶಾಸಕ ಶಿವಾನಂದ ಪಾಟೀಲ್ ಪುತ್ರಿ ಕಣಕ್ಕಿಳಿಯೋ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಶಾಸಕ ಯತ್ನಾಳ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ನಿಲ್ಲೋರು, ತಿಂಡಿ ಇದ್ದವರು ನಿಲ್ಲಲಿ. ಮುಂದಿನ ಬಾರಿ ಮುಸ್ಲೀಂರನ್ನೇ ಆರಿಸಿ ತರುತ್ತೇನೆಂದು ಹೇಳಿದ್ದನಲ್ಲಾ ಎಂದು ಶಿವಾನಂದ ಪಾಟೀಲ್ ವಿರುದ್ದ ವಾಗ್ದಾಳಿ ಮಾಡಿದರು. ನಿಮ್ಮ ಮುಸ್ಲೀಂ ಅಭಿಮಾನ ಎಲ್ಲಿ ಹೋಯ್ತು, ಅವರ ಬಗ್ಗೆ ಚಿಂತೆ ಮಾಡಬೇಕು. ಮುಸ್ಲೀಂರನ್ನೇ ಎಂಎಲ್ಎ ಮಾಡುತ್ತೇನೆಂದು ಸಿದ್ದರಾಮಯ್ಯ ಬಂದಿದ್ದ ವೇಳೆ ಭಾಷಣ ಮಾಡಿದ್ದರು ಎಂದು ಹೇಳಿದರು.
ಇನ್ನು ಗೋಕಾಕ್ಗೆ ಹೇಗೆ ಬರುತ್ತೀಯಾ ಎಂದು ನನಗೆ ಸವಾಲು ಹಾಕಿದ್ದರು. ಗೋಕಾಕ್ ಕ್ಷೇತ್ರ ಒಂದು ರೀತಿ ಬಿಹಾರ ರಾಜ್ಯವಾದಂತಾಗಿತ್ತು. ಜಾರಕಿಹೊಳಿ ಪ್ರಭಾವವಿರುವ ಗೋಕಾಕ್ಗೆ ಯಾರೂ ಹೋಗಲ್ಲ. ಅಲ್ಲಿ ಹೋಗಿ ಭಾಷಣ ಮಾಡುವ ಧಮ್ ಯಾರಿಗೂ ಇಲ್ಲ ಅಂದಿದ್ದರು. ಜಾರಕಿಹೊಳಿ ಪರವಾನಗಿ ಇಲ್ಲದೇ ಯಾವ ಲೀಡರ್ ಬರಬಾರದು. ಅವರದ್ದೇ ಒಂದು ಸಾಮ್ರಾಜ್ಯದಂತಾಗಿತ್ತು. ಹಾಗಾಗಿ ಜಾರಕಿಹೊಳಿ ಸವಾಲಿಗೆ ಉತ್ತರ ನೀಡಲು ಹೋಗಿದ್ದೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಶಾಸಕ ಯತ್ನಾಳ್ ಮತ್ತೆ ವಾಗ್ದಾಳಿ ಮಾಡಿದರು. ಜಾರಕಿಹೊಳಿಗೆ ಅಂತ್ಯಕಾಲ ಬಂದಿದೆ. ಅದಕ್ಕೆ ಹೀಗೆ ಮಾಡುತ್ತಿದ್ದಾರೆ. ಇಷ್ಟು ದಿನ ಮಾಡಿದಂತೆ ಇನ್ಮುಂದೆ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ರು.