ರಾಯ್ಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಧುನಿಕ ಭಾರತದ ಮಹಾತ್ಮ ಗಾಂಧಿ ಎಂದು ಛತ್ತೀಸ್ ಗಢದ ಕಾಂಗ್ರೆಸ್ ಶಾಸಕ ಅಮಿತೇಶ್ ಶುಕ್ಲಾ ಕರೆದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಮಹಾತ್ಮಾ ಗಾಂಧಿ, ರಾಹುಲ್ ಗಾಂಧಿ ನಡುವೆ ಅನೇಕ ಹೋಲಿಕೆಗಳಿವೆ. ಮಹಾತ್ಮ ಗಾಂಧಿ ದಂಡಿ ಯಾತ್ರೆ ಮಾಡಿದ್ರೆ, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ ಇವರು ರಾಷ್ಟ್ರೀಯ ಪುತ್ರ ಎಂದಿದ್ದಾರೆ.
ಮಹಾತ್ಮಾ ಗಾಂಧಿ ಭಾರತದ ಮೊದಲ ಪ್ರಧಾನಿಯಾಗಬಹುದಿತ್ತು. ಆದರೆ ಆಗಲಿಲ್ಲ. ಅದೇ ರೀತಿ 2004 ಮತ್ತು 2008ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು. ಆದರೆ ಆಗಲಿಲ್ಲ. ‘ದಂಡಿ ಯಾತ್ರೆ ಸಮಯದಲ್ಲಿ ಮಹಾತ್ಮ ಗಾಂಧಿಯವರು ಹಲವಾರು ಕಿಲೋಮೀಟರ್ಗಳಷ್ಟು ದೂರ ನಡೆದಿದ್ದರಂತೆ , ಅದೇ ರೀತಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ದೇಶಾದ್ಯಂತ ನಡೆದು, ಜನರೊಂದಿಗೆ ಸಂವಾದ ನಡೆಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
‘ಬ್ರಿಟಿಷ್ ಸಾಮ್ರಾಜ್ಯ’ವನ್ನು ಮಹಾತ್ಮಾ ಗಾಂಧಿ ಅಂತ್ಯ ಗೊಳಿಸಿದಂತೆ, ಅದಾನಿ ವಿಚಾರವಾಗಿ ಅಂಕಿ ಅಂಶಗಳೊಂದಿಗೆ ರಾಹುಲ್ ಮಾತನಾಡಿದ್ದಾರೆ ಎಂದು ಹೊಗಳಿದರು. ನಾನು ಈ ಹೇಳಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನೀಡಿದ್ದೇನೆ. ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವನು. ನನ್ನ ತಂದೆ ಮಾಜಿ ಮುಖ್ಯಮಂತ್ರಿ ಶ್ಯಾಮ ಚರಣ್ ಶುಕ್ಲಾ ಮತ್ತು ಚಿಕ್ಕಪ್ಪ ಹಿರಿಯ ಕಾಂಗ್ರೆಸ್ ನಾಯಕ ವಿದ್ಯಾ ಚರಣ್ ಶುಕ್ಲಾ ರಿಂದ ನಾನು ಕೇಳಿರುವ ವಿಷಯಗಳು ಎಂದರು.