ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿನ ಬಳಿಕ, ನನಗೆ ಸಚಿವ ಸ್ಥಾನ ಮಾನ ನೀಡಲು ಹಲವೆಡೆ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕಾರ್ಯಕರ್ತರು, ಬೆಂಬಲಿಗರು, ವಿವಿಧ ಸಂಘಟನೆಗಳ ಮುಖಂಡರು ನನಗೆ ಸಚಿವ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ, ಪತ್ರ ಚಳವಳಿ ನಡೆಸ್ತಿದ್ದು, ಇದನ್ನೆಲ್ಲ ಮಾಡಬಾರದು ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಈಗಲೇ ಸಂಘಟನೆಯತ್ತ ಗಮನಹರಿಸಬೇಕು. ಈ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಕೈಬಲಪಡಿಸಿ, ಜನನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಲ್ಲಿ ನಾಲ್ಕು ದಶಕಗಳ ಕಾಲ ಸಲ್ಲಿಸಿದ ನನ್ನ ಸೇವೆ, ಸಂಘಟನಾ ಶಕ್ತಿ ಗೊತ್ತಿದ್ದರಿಂದಲೇ ನನಗೆ ಅನೇಕ ಸ್ಥಾನಮಾನ ನೀಡಿದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಸ್ಪರ್ಧಿಸಲು ನನಗೆ ಟಿಕೆಟ್ ನೀಡಿ ಗೌರವಿಸಿದ್ದಾರೆ. ಆದರೆ ತಾಯಿಗೆ ದ್ರೋಹ ಮಾಡುವ ರೀತಿ ಪಕ್ಷದಲ್ಲಿದ್ದುಕೊಂಡೇ ಕೆಲವರು ಕುತಂತ್ರ ನಡೆಸಿದ್ದರಿಂದ ಕಡಿಮೆ ಮತಗಳ ಅಂತರದಲ್ಲಿ ಸೋಲು ಕಾಯಬೇಕಾಯಿತು ಎಂದರು.
ನಾನು ಧೃತಿಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಬೆಂಬಲಿಗರ ಅಭಿಮಾನಕ್ಕೆ ನಾನು ಸದಾ ಕೃತಜ್ಞನಾಗಿರುವೆ. ಜೊತೆಗೆ ಈ ರೀತಿ ಒತ್ತಡದ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸದಂತೆಯೂ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.