ನವದೆಹಲಿ: ಯಡಿಯೂರಪ್ಪನವರ ಪುತ್ರ ಎಂಬ ಕಾರಣಕ್ಕೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ಹೇಳ್ತಿರೋದು ನೋವಿನ ಸಂಗತಿ ಎಂದು ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸಮರ್ಥರನ್ನು ಗುರುತಿಸಿ ಟಿಕೆಟ್ ನೀಡುವುದು ಪಕ್ಷದ ಹೈಕಮಾಂಡ್ ಕೆಲಸ, ಆ ಕೆಲಸವನ್ನು ಹೈಕಮಾಂಡ್ ಬಹಳ ಅಚ್ಚುಕಟ್ಟಾಗಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಎಂಬ ಕಾರಣಕ್ಕೆ ನನಗೆ ಟಿಕೆಟ್ ಕೊಟ್ಟಿಲ್ಲ. ನನಗೆ ಟಿಕೆಟ್ ನೀಡಿದ್ದು ನಮ್ಮ ಹೈಕಮಾಂಡ್ ಎಂದು ತಿಳಿಸಿದರು.
ಯಾರೇ ಆಗಲೀ ಕುಟುಂಬದ ಸದಸ್ಯರು ಸ್ವಂತವಾಗಿ ಬೆಳೆಯಬೇಕೆಂಬುವುದು ನಮ್ಮ ತಂದೆಯವರ ಉದ್ದೇಶ, ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರರಿಗೆ ಟಿಕೆಟ್ ಕೇಳಿಲ್ಲ, ಅಂತಹ ರಾಜಕಾರಣಿಯೂ ಅವರಲ್ಲ ಎಂದರು. ನನ್ನ ತಂದೆ 40 ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಸ್ಪರ್ಧಿಸಿರುವುದು ನನ್ನ ಪುಣ್ಯ. ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರದಿಂದ ಸ್ಪರ್ಧಿಸುವುದು ನನ್ನ ಕನಸು. ಇದಕ್ಕಾಗಿ ಹೈಕಮಾಂಡ್ ಗೆ ಅಭಿನಂದನೆ ಎಂದು ತಿಳಿಸಿದರು.