ಚಿಕ್ಕಮಗಳೂರು : ಕಾಂಗ್ರೆಸ್ ಮಾಡಿದ ಕರ್ಮಕಾಂಡ ಯಾರೂ ಮರೆತಿಲ್ಲ. ಕೊಲೆ, ಸುಲಿಗೆ, ಭ್ರಷ್ಟಾಚಾರ, ಲೂಟಿ ಮಾಡಿದ್ದಾರೆ. ಅವರ ಕಾಲದ 59 ಕೇಸ್ ಲೋಕಾಯುಕ್ತಕ್ಕೆ ವಹಿಸಿದ್ದು ಸತ್ಯ ಹೊರಗೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರಿನ ರಂಭಾಪುರಿ ವೀರಸಿಂಹಾಸನ ಪೀಠ, ಬಾಳೆಹೊನ್ನೂರುನಲ್ಲಿ ಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರ ನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ 51 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಕಾರ್ಯಾರಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಲೋಕಾಯುಕ್ತಕ್ಕೆ ಮುಕ್ತ ಅಧಿಕಾರ ನೀಡಿ ಯಾರೇ ತಪ್ಪು ಮಾಡಿದರೂ ಕೂಡ ನಾವು ಕ್ರಮ ತೆಗೆದುಕೊಳ್ಳಲು ಸಿದ್ದ ಎನ್ನುವುದು ನಮ್ಮ ನೈತಿಕತೆ. ತಪ್ಪುಗಳನ್ನು ಮುಚ್ಚಿಹಾಕುವುದು ಕಾಂಗ್ರೆಸ್ ನೈತಿಕತೆ ಎಂದು ತಿಳಿಸಿದರು. ರಾಯಗಡದಲ್ಲಿ ಉದ್ಘಾಟನೆಯಾದ ಶಿವಾಜಿ ಪ್ರತಿಮೆ ಬಗ್ಗೆ ಕಾಂಗ್ರೆಸ್ ನವರು ಉದ್ಘಾಟಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ ಇದು ನಿಜಕ್ಕೂ ಹಾಸ್ಯಾಸ್ಪದ.
ಸರ್ಕಾರ ನಿರ್ಮಿಸಿರುವ ಪ್ರತಿಮೆಯಾಗಿದ್ದು, ಅಧಿಕೃತ ಉದ್ಘಾಟನೆಯಾದ ಮೇಲೆ ಭೇಟಿ ಕೊಡಬಹುದು. ಆದರೆ ಉದ್ಘಾಟನೆಯಾದ ನಂತರ ಪುನಃ ಉದ್ಘಾಟಿಸುವುದು ಕೇಳಿಯೇ ಇಲ್ಲ. ಅಧಿಕಾರದ ಹೊರಗಿದ್ದರೂ, ಅಧಿಕಾರದ ಆಸೆ ಹಾಗೂ ಹತಾಶ ಭಾವ ಎಷ್ಟಿದೆ ಎಂದು ಸ್ಪಷ್ಟವಾಗುತ್ತದೆ ಎಂದರು.