ಬೆಳಗಾವಿ : ಕ್ಷೇತ್ರವಿಲ್ಲದೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರದೇಶಿಯಂತೆ ಓಡಾಡ್ತಿರುವ ಗಿರಾಕಿಯಾಗಿದ್ದಾರೆ ಎಂದು ಸಚಿವ ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ನಲ್ಲಿ ಊಟ ಮಾಡಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದೀರಿ. ಕಾಂಗ್ರೆಸ್ನಲ್ಲಿ ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ಗೆ ಚೂರಿ ಹಾಕಿದ್ದೀರಿ. ಜೊತೆಯಲ್ಲಿ ಇದ್ದವರನ್ನೇ ಮುಗಿಸಿಕೊಂಡು ಬರುತ್ತಿದ್ದಿರಾ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ತಕ್ಕ ಪಾಠ ಆಗಲಿದೆ ಎಂದರು.
ಸಿದ್ದರಾಮಯ್ಯ ನನ್ನ ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ಇಂತಹ ಪರದೇಶಿ ಗಿರಾಕಿಗೆ ಉತ್ತರಿಸುವ ಅವಶ್ಯಕತೆ ನನಗಿಲ್ಲ ಎಂದರು. ತಾವು ಸಿಎಂ ಆಗಿದ್ದಂತಹವರು, ನನ್ನ ಸ್ಪರ್ಧೆಯ ಬಗ್ಗೆ ಮಾತನಾಡುವ ಮೊದಲು ನಿಮ್ಮ ಕ್ಷೇತ್ರ ಯಾವುದು ಎಂದು ಘೋಷಣೆ ಮಾಡಿ. ಮೊಳಕಾಲ್ಮೂರು ಕ್ಷೇತ್ರದಲ್ಲಿ ತಾಕತ್ ಇದ್ದರೆ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯ ನನಗೆ ಸವಾಲ್ ಹಾಕಿದ್ದಾರೆ. ನನ್ನ ಗೆಲವು ಸೋಲಿನ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ನಂತರ ಚಾಮುಂಡೇಶ್ವರಿ ಕ್ಷೇತ್ರದ ಜನ ಸೋಲಿಸಿದರು. ಸಿದ್ದರಾಮಯ್ಯನವರು ಅಲ್ಲಿ ಅಹಂಕಾರದಿಂದಲೇ ಸೋತಿದ್ದಾರೆ. ನಾನು 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. 7 ಸಲ ಸ್ಪರ್ಧೆ ಮಾಡಿ ಐದು ಸಲ ಎಂಎಲ್ಎ, ಒಮ್ಮೆ ಸಂಸದನಾಗಿ ಆಯ್ಕೆಯಾಗಿದ್ದೇನೆ. ತಾವು ಈ ಸಲ ಬದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೊಳ್ಳಿ. ಬದಾಯಿ ಜನರು ತಮ್ಮ ಮುಖಕ್ಕೆ ಮಂಗಳಾರತಿ ಮಾಡುತ್ತಾರೆ ಎಂದರು