ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿದ್ದ ಹೋರಾಟವನ್ನು ಖಾಸಗಿ ಸಾರಿಗೆ ಒಕ್ಕೂಟಗಳು ಹಿಂದಕ್ಕೆ ಪಡೆದಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟ ನಿರತರ ಮನವಿ ಆಲಿಸಿದ ಬಳಿಕ ಬಂದ್ ಸಂಘಟನೆಗಳು ಕೈ ಬಿಟ್ಟಿವೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸಗಿ ಸಾರಿಗೆ ಒಕ್ಕೂಟದ ಪ್ರಮುಖ ನಟರಾಜ್ ಶರ್ಮಾ, ನಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸ್ವತಃ ಸಾರಿಗೆ ಸಚಿವರೇ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ನಾಳೆಯಿಂದಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಬಂದ್ ವಾಪಸ್ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬಂದ್ ಮಾಡಿಸುತ್ತಿದ್ದಾರೆ; ಎಂ.ಬಿ ಪಾಟೀಲ್
ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ರಾಮಲಿಂಗಾ ರೆಡ್ಡಿ ಏನು ಹೇಳಿದ್ರು..
ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟಗಳ ಬಹುತೇಕ ಬೇಡಿಕೆ ಈಡೇರಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದ ಫ್ರೀಡಂ ಪಾರ್ಕ್ಗೆ ಭೇಟಿ ನೀಡಿದ ಅವರು, ಸಂಘಟನೆಗಳ ಬೇಡಿಕೆ ಆಲಿಸಿ ಬಳಿಕ ಮಾತನಾಡಿದರು.
ಅವರ ಬಹುತೇಕ ಎಲ್ಲಾ ಬೇಡಿಕೆ ಇಡೇರಿಸುತ್ತೇವೆ. ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ನಿಗಮ ಮಂಡಳಿಯನ್ನು ಮಾಡೇ ಮಾಡ್ತೇವೆ. ಅವರ ಸಮಸ್ಯೆಗಳು ಈ ಸರ್ಕಾರ ಬಂದಾಗಿನಿಂದ ಒರೋದಲ್ಲ ಹಿಂದಿನಿಂದಲೂ ಇದೆ. ಆದರೆ ಶಕ್ತಿ ಯೋಜನೆಯಿಂದ ಸಮಸ್ಯೆಯಾಗಿದೆ ಎಂದು ಅವರು ಹೇಳುತ್ತಿದ್ದಾರೆ ಎಂದರು.
ಓಲಾ-ಊಬರ್ ಕುರಿತ 4 ಕೇಸ್ಗಳು ಕೋರ್ಟ್ನಲ್ಲಿವೆ. ವಕೀಲರೊಂದಿಗೆ ಈ ಬಗ್ಗೆ ಚರ್ಚಿಸಿ ಬೇಗ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಇದರ ಜೊತೆ ಬೈಕ್ ಟ್ಯಾಕ್ಸಿ ಕೇಸ್ ಸಹ ಕೋರ್ಟ್ನಲ್ಲಿದೆ. ಹೀಗಾಗಿ ಈ ಕೇಸ್ಗಳ ವೆಕೇಟ್ ಮಾಡಲು ವಕೀಲರ ಬಳಿ ಮಾತನಾಡಲಾಗುವುದು ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.