ಬೆಂಗಳೂರು : ಸಂವಿಧಾನ ವಿರೋಧಿಸುವವರ ಬಗ್ಗೆ ಸದಾ ಎಚ್ಚರವಾಗಿರಬೇಕು. ಕೆಲವು ಕೋಮುವಾದಿಗಳು ಮನುಸ್ಮೃತಿ ಜಾರಿಗೆ ತರಲು ಬಯಸ್ತಿದ್ದಾರೆ. ಅಂತವರನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮೆಟ್ಟಿಲ ಮೇಲೆ ನಡೆದ ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಈ ಬಗ್ಗೆ ಇತಿಹಾಸ ಪುಟಗಳಲ್ಲಿ ಉಲ್ಲೇಖವಿದೆ. ಬಸವಣ್ಣ ಅನುಭವ ಮಂಟಪ ಕಟ್ಟಿ, ಅದರ ಅಧ್ಯಕ್ಷತೆ ಅಲ್ಲಮ ಪ್ರಭುವಿಗೆ ವಹಿಸಿದ್ದರು. ಬೌದ್ಧರ ಕಾಲದಲ್ಲಿ ಸಂಘಗಳ ರಚನೆ ಮಾಡಲಾಗುತ್ತಿತ್ತು. ಸಿಂಧೂ ನಾಗರಿಕತೆಯಲ್ಲೂ ಪ್ರಜಾಪ್ರಭುತ್ವದ ಕಲ್ಪನೆ ಇತ್ತು. ಮೊದಲು ಗಣತಂತ್ರ ವ್ಯವಸ್ಥೆ ಎಂದು ಕರೆಯುತ್ತಿದ್ದರು. ಬಳಿಕ ಅದು ಜನತಂತ್ರ ಆಯಿತು. ದೇಶದಲ್ಲಿ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸಂವಿಧಾನವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಬಹುದು ಎಂದು ಸಿಎಂ ಹೇಳಿದರು.
ಇದನ್ನೂ ಓದಿ : ಇಂದು ‘ಕೈ’ ಹಿಡಿಯಲಿದ್ದಾರೆ ಅಶೋಕ್, ಹೆಚ್ಡಿಕೆ ಬೆಂಬಲಿಗರು!
ಅಂಬೇಡ್ಕರ್ ಆಶಯದಂತೆ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ. ಈ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇನ್ಮುಂದೆ ಶಾಲೆ, ಕಾಲೇಜುಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.