ಬೆಂಗಳೂರು : ‘ಇಂಡಿಯಾ’ ಹೆಸರನ್ನು ‘ಭಾರತ್’ ಎಂದು ಬದಲಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವನ್ನು ಕರ್ನಾಟಕ ಬಿಜೆಪಿ ಸೇರಿದಂತೆ ವಿವಿಧ ನಾಯಕರು ಸ್ವಾಗತಿಸಿದ್ದಾರೆ.
ಭಾರತ್ ಹೆಸರನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ – ರಾಷ್ಟ್ರಕವಿ ಕುವೆಂಪು, ಭಾರತ್ ಮಾತಾ ಕೀ ಜೈ’ ಎಂದು ಬರೆದುಕೊಂಡಿದೆ.
ಬಿಜೆಪಿ ನಾಯಕ ಸಿ.ಟಿ ರವಿ ‘ರಿಪಬ್ಲಿಕ್ ಆಫ್ ಭಾರತ್, ಭಾರತ್ ಮಾತಾ ಕೀ ಜೈ’ (Republic of BHARAT”, BHARAT Mata Ki Jai) ಎಂದು ಟ್ವೀಟ್ ಮಾಡಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿ, ಭಾರತ ಗಣರಾಜ್ಯ (Republic of BHARAT)- ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಾಗ್ತಿದೆ ಎಂದಿದ್ದಾರೆ.
ಭಾರತ್ ಎಂದು ಹೆಸರು ಬದಲಾವಣೆ ಮಾಡುವ ಕೇಂದ್ರದ ನಿರ್ಧಾರವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ವಾಗತಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಇಂಡಿಯಾ ಎಂಬುವುದು ಗುಲಾಮಗಿರಿಯ ಹೆಸರು. ಅದನ್ನು ಬದಲಿಸಿ ಸನಾತನ ಸಂಸ್ಕೃತಿಯ ಭಾರತ ಎಂದು ನಾಮಕರಣ ಮಾಡುವುದು ಸಂತಸದ ವಿಷಯ. ನಮ್ಮ ದೇಶದ ಬಸ್, ರೈಲು ನಿಲ್ದಾಣ ಹಾಗೂ ಇತರೆಡೆಗಳಲ್ಲಿ ಇರುವ ಗುಲಾಮಗಿರಿಯ ಹೆಸರುಗಳನ್ನು 2014ರ ಬಳಿಕ ಬದಲಾವಣೆ ಮಾಡಲಾಗ್ತಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅನೇಕ ಮಂದಿ ನಟ, ರಾಜಕಾರಣಿ ಪವನ್ ಕಲ್ಯಾಣ್, ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಸೇರಿದಂತೆ ಕೆಲವರು ಇಂಡಿಯಾ ಎಂಬುವುದು ಭಾರತ ಎಂದು ಬದಲಾಗಬೇಕು ಎಂದು ಈ ಹಿಂದೆ ಹೇಳಿದ್ದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ವಿಶ್ವಕಪ್ ಗೆ ಭಾರತ ತಂಡದ ಪಟ್ಟಿಯನ್ನು ಪೋಸ್ಟ್ ಮಾಡಿರುವ ಐಸಿಸಿ ಟ್ವೀಟ್ ರಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಟೀಂ ಇಂಡಿಯಾ ಅಲ್ಲ, ಟೀಂ ಭಾರತ. ಈ ವಿಶ್ವಕಪ್ನಲ್ಲಿ ನಾವು ಕೊಹ್ಲಿ, ರೋಹಿತ್, ಬುಮ್ರಾ, ಜಡ್ಡು ಅವರನ್ನು ಹುರಿದುಂಬಿಸೋಣ. ನಮ್ಮ ಹೃದಯದಲ್ಲಿ ಭಾರತವಿರಲಿ. ನಮ್ಮ ಆಟಗಾರರು “ಭಾರತ್” ಎಂದು ಬರೆದಿರುವ ಜೆರ್ಸಿಯನ್ನು ಧರಿಸಲಿ ಎಂದು ಬರೆದುಕೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕೆಲ ಬಿಜೆಪಿ ಬೆಂಬಲಿಗರು ಬ್ರಿಟಿಷ್ ಇಂಡಿಯಾ ತೊಲಗಿತು, ಭವ್ಯ “ಭಾರತ” ಬೆಳಗಿತು. ಭಾರತ್ ಮಾತಾ ಕೀ ಜೈ ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.