ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ಮೂಲಕ ₹1.30 ಕೋಟಿ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಿಂಗ್ಸ್ಕೋರ್ಟ್ನ ಎಲ್.ವಿವೇಕಾನಂದ ಎಂಬವರಿಂದ ಸಿದ್ದರಾಮಯ್ಯ ₹1.30 ಕೋಟಿ ಲಂಚ ಪಡೆದಿದ್ದರು. ಲಂಚದ ಹಣ ಸಂದಾಯವಾದ ನಂತರವೇ ಅವರು 2014ರಲ್ಲಿ ಟರ್ಫ್ ಕ್ಲಬ್ ಉಸ್ತುವಾರಿ ಹುದ್ದೆಗೆ ವಿವೇಕಾನಂದ ಅವರನ್ನು 3 ವರ್ಷಗಳ ಅವಧಿಗೆ ನೇಮಿಸಿದರು. ವಿವೇಕಾನಂದ ಅವರಿಂದ ತಾವು ಸಾಲ ಪಡೆದಿರುವುದಾಗಿ ಸಿದ್ದರಾಮಯ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದರು. ಆದರೆ ಇದು ಸಾಲವಾಗಿರಲಿಲ್ಲ. ಕೇಂದ್ರ ಗೃಹ ಇಲಾಖೆ ರೂಪಿಸಿರುವ ನಿಯಮಗಳ ಪ್ರಕಾರ ಯಾರಿಗಾದರೂ ಯಾವುದಾದರೂ ಹುದ್ದೆ ನೀಡುವುದಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಚೆಕ್ ಪಡೆಯುವಂತಿಲ್ಲ. ಈ ಸಂಬಂಧ ಸಿದ್ದರಾಮಯ್ಯ ವಿರುದ್ಧ ನಾಳೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಎನ್.ಆರ್.ರಮೇಶ್ ಗಂಭಿರ ಆರೋಪ ಮಾಡಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಾಲಂ 7, 8, 9, 10, 13ರ ಅಡಿಯಲ್ಲಿ ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ ಹಣ ಪಡೆದಿರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಸಿದ್ದರಾಮಯ್ಯ ಅವರ ವಿರುದ್ಧ ಮುಖ್ಯಮಂತ್ರಿ ಸ್ಥಾನದ ದುರುಪಯೋಗ, ಭ್ರಷ್ಟಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸುತ್ತೇವೆ. ಸಿದ್ದರಾಮಯ್ಯ ವಿರುದ್ಧ ಸಿಬಿಐ, ಸಿಐಡಿ, ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಹುದ್ದೆಗೆ ಪ್ರತಿಯಾಗಿ ಕಿಕ್ಬ್ಯಾಕ್ ಪಡೆದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆಯಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಸಿಎಂ ಆದೇಶಿಸುವ ವಿಶ್ವಾಸವಿದೆ ಎಂದು ಗಂಭೀರ ಆರೋಪ ಮಾಡಿದ್ರು.