ಬೆಂಗಳೂರು : ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಖುಷಿಯಲ್ಲಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡ ಕಾರಿದೆ. ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿದೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ‘ತುಘಲಕ್’ ದರ್ಬಾರಿನ ಶತಕದ ಸಂಭ್ರಮದಲ್ಲಿದೆ. ಸರ್ಕಾರ ನೂರು ದಿನಗಳಲ್ಲಿ ಸಾಧಿಸಿದ್ದೇನು ಎಂದು ಹುಡುಕಿದರೆ ನೂರಕ್ಕೂ ಹೆಚ್ಚು ಹಳವಂಡಗಳೇ ತುಂಬಿವೆ. ಭಂಡ ಕಾಂಗ್ರೆಸ್ಸಿನ 100 ಕರ್ಮ ಕಾಂಡಗಳು ಬಯಲಾಗಿವೆ ಎಂದಿದೆ.
ಗ್ಯಾರಂಟಿಗಳ ಪುಂಗಿ ಊದಿ ಅವುಗಳ ಅನುಷ್ಠಾನ ಸಮರ್ಪಕವಾಗಿ ಜಾರಿಮಾಡಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕೂ ಮೊದಲೇ ರಾಜ್ಯದಲ್ಲಿ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ದರ್ಬಾರ್ ಶುರುವಾಯ್ತು. ಉನ್ನತ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅಧಿಕಾರ ಚಲಾಯಿಸಿದ್ದರು. ಈ ಮೂಲಕ ರಾಜ್ಯದ ಬೊಕ್ಕಸದಿಂದ ಕಾಂಗ್ರೆಸ್ ಹೈಕಮಾಂಡ್ಗೆ ಸಂದಾಯವಾದದ್ದು ಎಷ್ಟು..? ಸುರ್ಜೇವಾಲಾ ಗಂಟು ತೆಗೆದುಕೊಂಡು ದೆಹಲಿ ಫ್ಲೈಟ್ ಹತ್ತುತ್ತಿದ್ದಂತೆ ನಂತರ ಅಸಲಿ ಆಟ ಶುರುವಿಟ್ಟುಕೊಂಡಿದ್ದು ಸಿದ್ದರಾಮಯ್ಯ ಅವರ ಸುಪುತ್ರ ಶ್ಯಾಡೋ ಸಿಎಂ ಯತೀಂದ್ರರು ಎಂದು ಬಿಜೆಪಿ ಹೇಳಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅತಿಹೆಚ್ಚು ಸಂಭ್ರಮಿಸಿದ್ದು ಜಿಹಾದಿ ಮನಸ್ಥಿತಿಗಳು. ಕಾಂಗ್ರೆಸ್ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರನ್ನು ಅಮಾಯಕರು ಎಂದು ಬಿಡುಗಡೆ ಮಾಡಲು ಮುಂದಾಗಿದೆ. ಉಡುಪಿಯ ಅಮಾನುಷ ಘಟನೆಯನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿತು. ಹಿಂದೂ ಕಾರ್ಯಕರ್ತರ ಹತ್ಯೆಗಳು ಶುರುವಾಗಿವೆ. ಸುಳ್ಳು ಸುದ್ದಿಯ ಹೆಸರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸತ್ಯವನ್ನು ಕಗ್ಗೊಲೆ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಸಿಗಾಗಿ ಪೋಸ್ಟಿಂಗ್ ದಂಧೆ ರಾಜ್ಯದಲ್ಲಿ ಹೊಸ ಅನಧಿಕೃತ ಉದ್ಯಮವನ್ನೇ ಶುರು ಮಾಡಿದೆ. ಸಿದ್ದರಾಮಯ್ಯ ಸಾಂವಿಧಾನಿಕ ಹುದ್ದೆಯನ್ನೇ ಪುತ್ರನಿಗೆ ನೀಡಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ ಕಿರುಕುಳಕ್ಕೆ ಮನನೊಂದು ಸಾರಿಗೆ ನೌಕರ ಆತ್ಮಹತ್ಯೆ ಯತ್ನ ನಡೆಸಿದರು. ಪ್ರಧಾನಿ ಮೋದಿ ಸರ್ಕಾರದ 5 ಕೆಜಿ ಅಕ್ಕಿಯಲ್ಲಿ ಎರಡು ಕೆಜಿಯನ್ನು ಕಾಂಗ್ರೆಸ್ ಸರ್ಕಾರ ವೇ ತಿಂದು ತೇಗಿದೆ. ಆತುರಕ್ಕೆ ಬಿದ್ದ ಸಿದ್ದರಾಮಯ್ಯ ಅವರು ಅವಾಸ್ತವಿಕವಾಗಿ ಶಕ್ತಿ ಯೋಜನೆಯನ್ನು ಜಾರಿ ಮಾಡಿದರು. ಆದರೆ, ಇದರಿಂದ ತೊಂದರೆ ಆಗಿದ್ದು ಜನರಿಗೇ ಹೊರತು ಕಾಂಗ್ರೆಸ್ ಸರ್ಕಾರಕ್ಕಲ್ಲ ಎಂದು ಹೇಳಿದೆ.
ಸುಮಾರು 10 ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ ಹಲವು ವಿಷಯಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.