ಕೊಪ್ಪಳ : ಲೋಕಸಭಾ ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲು ಆಪರೇಷನ್ ಹಸ್ತದ ವಿಚಾರ ಮುನ್ನೆಲೆಗೆ ತಂದಿದ್ದಾರೆ. ನಮ್ಮ ಬಿಜೆಪಿ ಪಕ್ಷದಲ್ಲಿಯೂ ಸ್ವಲ್ಪ ಸಮಸ್ಯೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನು ತಕ್ಷಣವೇ ಘೋಷಣೆ ಮಾಡಬೇಕು. ನಾನು ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ವಿನಂತಿ ಮಾಡುವೆ, ತೀವ್ರಗತಿಯಲ್ಲಿ ಎರಡೂ ಹುದ್ದೆಗಳಿಗೆ ನಾಯಕರನ್ನು ಆಯ್ಕೆ ಮಾಡಬೇಕೆಂದು ಸಂಸದ ಸಂಗಣ್ಣ ಕರಡಿ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷಗಳ ನಾಯಕರನ್ನು ಆಯ್ಕೆಮಾಡದ ವಿಷಯವನ್ನೆ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರತಿ ವಿಷಯದಲ್ಲೂ ನಮ್ಮನ್ನು ಟೀಕಿಸುತ್ತಿದೆ. ನಾವು ಸಹ ಯಾರ ಹತ್ತಿರ ಮಾತನಾಡಬೇಕು ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ : ‘ಸುಪ್ರೀಂನಿಂದ ಬೈಸ್ಕೊಳ್ಳೋಕೆ ನಾವು ಸಿದ್ದರಿಲ್ಲ, ನೀರು ಬಿಡಲು ನಾನು ಸೂಚಿಸಿಲ್ಲ’
ನಮಗೆ ಆಡಳಿತ ಪಕ್ಷವನ್ನು ಟೀಕಿಸಲು ಆಗುತ್ತಿಲ್ಲ. ಆಡಳಿತ ಪಕ್ಷದ ವೈಫಲ್ಯ ತುಂಬಾ ಇದೆ, ಕೇವಲ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತಗೊಳಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳು ಕೇವಲ ಪಾರ್ಲಿಮೆಂಟ್ ಚುನಾವಣೆ ಮುಗಿಯುವವರೆಗೂ ಮಾತ್ರ ಇರುತ್ತವೆ ಎಂದು ಟೀಕಿಸಿದರು.
ತಾವು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಕರಡಿ, ಕಾಂಗ್ರೆಸ್ ನಾಯಕರು ನನ್ನ ಮೇಲೆ ಅಭಿಮಾನದಿಂದ ಅವರ ಪಕ್ಷ ಬಲವರ್ಧನೆ ಕರೆಯುತ್ತಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ. ಬಿಜೆಪಿ ಪಾರ್ಟಿಯಿಂದಲೇ ಟಿಕೆಟ್ ಪಡೆಯುವೆ. ಮೋದಿ ಅವರಂತಹ ನಾಯಕತ್ವ ಬಿಟ್ಟು ಹೋಗೋಕೆ ಆಗುತ್ತಾ?. ಜನ ಆಶೀರ್ವಾದ ಮಾಡಿದರೆ ಹ್ಯಾಟ್ರಿಕ್ ಗೆಲುವು ಸಾಧಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.