ಚೆನ್ನೈ: ತಮ್ಮ ತಪ್ಪುಗಳ ಮರೆಮಾಚಲು ಬಿಜೆಪಿ ಧರ್ಮವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಬಿಜೆಪಿ ವಿರುದ್ಧ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ಅವರು ತಮ್ಮ ಪಾಡ್ಕಾಸ್ಟ್ ‘ಸ್ಪೀಕಿಂಗ್ ಫಾರ್ ಇಂಡಿಯಾ’ದಲ್ಲಿ ಪುತ್ರ ಉದಯ್ನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಹೇಳಿಕೆ ಸಂಬಂಧ ಮಾತನಾಡಿದ್ದಾರೆ.
ಬಿಜೆಪಿ ಜನರ ಧಾರ್ಮಿಕ ಭಾವನೆಗೆ ಬೆಂಕಿಯ ಹಚ್ಚಿ ಉರಿಯುತ್ತಿರುವ ಜ್ವಾಲೆಯಲ್ಲಿ ಬೆಚ್ಚಗಾಗುತ್ತಿದ್ದಾರೆ ಎಂದಿದ್ದಾರೆ. ಪ್ರತಿ ವರ್ಷ 2 ಕೋಟಿ ಜನರಿಗೆ ಉದ್ಯೋಗ ಖಾತರಿ, ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಜನರ ಕಲ್ಯಾಣ ಯೋಜನೆಗಳು ಸೇರಿದಂತೆ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಆದರೆ ಈ ವೈಫಲ್ಯಗಳ ಮರೆಮಾಚಲು ಅವರು ಧರ್ಮವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 9 ವರ್ಷದಿಂದ ಒಂದೂ ದಿನ ರಜೆ ಪಡೆಯದ ಪ್ರಧಾನಿ ಮೋದಿ
2024ರ ಚುನಾವಣೆಯು ಯಾರು ಅಧಿಕಾರಕ್ಕೆ ಬರಬೇಕು ಎಂಬುದಕ್ಕಿಂತ ‘ಯಾರು ಅಧಿಕಾರಕ್ಕೆ ಬರಬಾರದು’ ಎಂಬುದನ್ನು ನಿರ್ಧರಿಸಬೇಕು. 2014ರಿಂದ ಕಳೆದ ವರ್ಷದವರೆಗೆ ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯ ಪಾವತಿಸಿದ ತೆರಿಗೆ 5 ಲಕ್ಷ 16 ಸಾವಿರ ಕೋಟಿ ರೂ. ಆದರೆ, ಇದಕ್ಕೆ ಪ್ರತಿಯಾಗಿ ನಮಗೆ ಸಿಕ್ಕಿದ್ದು 2 ಲಕ್ಷದ 8 ಸಾವಿರ ಕೋಟಿ ರೂಪಾಯಿ, ಇದು ಹೇಗೆ ಸಾಧ್ಯ? ಹಣಕಾಸು ಹಂಚಿಕೆಯಲ್ಲಿ ತಮಿಳುನಾಡು ನಷ್ಟ ಅನುಭವಿಸಿದೆ ಎಂದಿದ್ದಾರೆ.
12ನೇ ಹಣಕಾಸು ಆಯೋಗದ ಪ್ರಕಾರ ತಮಿಳುನಾಡಿಗೆ ಶೇ 5.305ರಷ್ಟು ಹಣ ಹಂಚಿಕೆಯಾಗಿತ್ತು. ಆದಾಗ್ಯೂ, 15 ನೇ ಹಣಕಾಸು ಆಯೋಗದಲ್ಲಿ, ಅದನ್ನು 4.079 ಪ್ರತಿಶತಕ್ಕೆ ಇಳಿಸಲಾಯಿತು, ನಾವು ಪ್ರತಿವರ್ಷ ಸಾವಿರಾರು ಕೋಟಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಚಂದ್ರಯಾನ ಸಕ್ಸಸ್ ಆಯ್ತು, ʼರಾಹುಲ್ಯಾನʼ ಲಾಂಚ್ ಕೂಡ ಆಗಲಿಲ್ಲ: ರಾಜನಾಥ್ ಸಿಂಗ್
ಸಾಮಾಜಿಕ ನ್ಯಾಯ, ಜಾತ್ಯತೀತ ರಾಜಕೀಯ, ಸಮಾಜವಾದ, ಸಮಾನತೆ, ಸಾಮಾಜಿಕ ಸೌಹಾರ್ದತೆ, ರಾಜ್ಯ ಸ್ವಾಯತ್ತತೆ, ಫೆಡರಲಿಸಂ ಮತ್ತು ವೈವಿಧ್ಯತೆಯಲ್ಲಿ ಏಕತೆ ಈ ಅಂಶಗಳ ಸಂಪೂರ್ಣ ವೈಭವದಲ್ಲಿ ಅಭಿವೃದ್ಧಿ ಹೊಂದುವ ಭಾರತವೇ ನಿಜವಾದ ಭಾರತ. ಅಂತಹ ರಾಷ್ಟ್ರವನ್ನು ಮರುಸ್ಥಾಪಿಸಲು I.N.D.I.A ಒಕ್ಕೂಟವನ್ನು ರಚಿಸಲಾಗಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.