ಹಾವೇರಿ: ಭಾಜಪ ಇಡೀ ಕರ್ನಾಟಕದಲ್ಲಿ ಅತ್ಯಂತ ಆಳವಾಗಿ ಬೇರೂರಿರುವ ಪಕ್ಷ, ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಭಾಜಪದ ಸಣ್ಣ ಎಲೆಯನ್ನೂ, ನಮ್ಮ ಗಟ್ಟಿ ಬೇರುಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜನಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿ. ಬೂತ್ನಿಂದ ಹಿಡಿದು ರಾಜ್ಯ ಮಟ್ಟದವರೆಗೂ ಸಂಘಟಿತವಾಗಿರುವ ಪಕ್ಷ. ಭಾಜಪಕ್ಕೆ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರ ನಾಯಕತ್ವವಿದೆ ಎಂದರು.
ಭಾಜಪದ ಡಬಲ್ ಇಂಜಿನ್ ಸರ್ಕಾರವಿದೆ. ಈ ಸಂಕಲ್ಪ ಯಾತ್ರೆ 2023 ರ ಚುನಾವಣೆಯ ವಿಜಯ ಸಂಕಲ್ಪ ಯಾತ್ರೆ. ಸಚಿವ ಬಿ.ಸಿ.ಪಾಟೀಲರು ಶಾಸಕರಿದ್ದಾಗ ಈ ತಾಲ್ಲೂಕಿನ ಅಭಿವೃದ್ಧಿ ಹೇಗಿತ್ತು. ಅವರು ಇಲ್ಲದಿದ್ದಾಗ ಅಭಿವೃದ್ಧಿ ಹೇಗಿದೆ ಎಂದು ಯೋಚಿಸಿದರೆ ಈ ತಾಲ್ಲೂಕಿನ ಅಭಿವೃದ್ಧಿಯಲ್ಲಿ ಸಿಂಹಪಾಲು ಬಿ.ಸಿ.ಪಾಟೀಲರದ್ದು ಎಂದರು.
ಬಿ.ಸಿ.ಪಾಟೀಲರು ಮೊದಲ ಬಾರಿಗೆ ಆಯ್ಕೆಯಾಗಿ ಬಂದಾಗ ಶಪಥ ತೊಟ್ಟಂತೆ ಅಭಿವೃದ್ಧಿ ಮಾಡಿದ್ದಾರೆ. ಅವರು ಶಾಸಕರು ಅಥವಾ ಮಂತ್ರಿಗಳಾದಾಗ ಈ ಕ್ಷೇತ್ರ ಅಭಿವೃದ್ಧಿಯಾಗುತ್ತದೆ, ಕಾಂಗ್ರೆಸ್ ಪಕ್ಷಕ್ಕೆ ಸೋಲು ಗ್ಯಾರಂಟಿಯಾಗಿ ಹತಾಶರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಜನತೆ ಕಾಂಗ್ರೆಸ್ ಆಡಳಿತವನ್ನು ನೋಡಿ ಮನೆಗೆ ಕಳಿಸಿದ್ದಾರೆ. ಅವರಿಗೆ ಅದೇಖಾಯಂ ಜಾಗ. ಭಾಜಪ 2023 ರಲ್ಲಿ ತನ್ನದೇ ಸ್ಪಷ್ಟ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ, ಟೀಕೆ ಮಾಡುವವರಿಗೆ ಬೆಲೆ ಇಲ್ಲ. ನಮ್ಮ ಕೆಲಸ ನೋಡಿ, ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದರು.