ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಪೂರೈಸಿರುವ ಕುರಿತು ತನಿಖೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಹೆಚ್.ಕೆ ಪಾಟೀಲ್, ಶಾಲಾ ಮಕ್ಕಳಿಗೆ ಸಮವಸ್ತ್ರ ಒದಗಿಸಿರುವವರಿಗೆ ಬಿಲ್ ಬಾಕಿ ಇರುವ ಬಗ್ಗೆ ಚರ್ಚೆ ನಡೆಸಲಾಗಿಯಿತು. ಸಮವಸ್ತ್ರ ಪೂರೈಸಿರುವ ಕೆಹೆಚ್ಡಿಸಿಗೆ 14.48 ಕೋಟಿ ರೂ. ಬಿಡುಗಡೆಗೆ ನಿರ್ಣಯ ಮಾಡಲಾಗಿದೆ ಎಂದರು.
ಇದನ್ನೂ ಓದಿ : ಇಂದಿನ ಸಚಿವ ಸಂಪುಟ ಸಭೆಯ ನಿರ್ಣಯಗಳೇನು?, ಇಲ್ಲಿದೆ ಸಂಪೂರ್ಣ ಮಾಹಿತಿ
ಕೇಂದ್ರೀಯ ಭಂಡಾರದಿಂದ ಶೇ. 90ರಷ್ಟು ಕಳಪೆ ಸಮವಸ್ತ್ರ ಪೂರೈಸಲಾಗಿದೆ. ಕಳಪೆ ಸಮವಸ್ತ್ರ ಪೂರೈಸಿದವರಿಗೆ ಹಣ ಕೂಡ ಕೊಡಲಾಗಿದೆ. ಈ ಬಗ್ಗೆ ತನಿಖೆ ಮಾಡಲು ತೀರ್ಮಾನಿಸಲಾಗಿದೆ. ಕಳಪೆ ಸಮವಸ್ತ್ರ ಖರೀದಿ ಮಾಡಿದವರು ಮತ್ತು ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಳಪೆ ಸಮವಸ್ತ್ರ ಪೂರೈಕೆದಾರರಿಗೆ ಎಷ್ಟು ಹಣ ಒದಗಿಸಲಾಗಿತ್ತು ಎಂಬ ಮಾಹಿತಿ ತರಿಸಿಕೊಳ್ತೀವಿ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕಳಪೆ ಸಮವಸ್ತ್ರ ಪೂರೈಕೆ ಮಾಡಲಾಗಿದೆ. ಹಣವೂ ಹಿಂದಿನ ಸರ್ಕಾರದಲ್ಲೇ ಕೊಡಲಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಪೂರೈಸಿದ್ದ ಸಮವಸ್ತ್ರದ ಗುಣಮಟ್ಟ ಚೆನ್ನಾಗಿದೆ. ಕೇಂದ್ರೀಯ ಭಂಡಾರದಿಂದ ಪೂರೈಸಿದ ಸಮವಸ್ತ್ರ ಕಳಪೆಯಾಗಿದೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.