ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ISRO) ಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ಸಿಗಾಗಿ ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಜನರು, ‘ವಿಕ್ರಮ’ನ ಸೇಫ್ ಲ್ಯಾಂಡಿಂಗ್ಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಗರದ ಗವಿಗಂಧಾರೇಶ್ವರ, ದೊಡ್ಡಗಣಪತಿ ದೇವಾಲಯ ಹಾಗೂ ಬನಶಂಕರಿ ದೇವಾಯದಲ್ಲಿ ಭಕ್ತರು ‘ವಿಕ್ರಮ’ನ ಯಶಸ್ಸಿಗಾಗಿ ದೇವರಲ್ಲಿ ಮೊರೆ ಇಟ್ಟರು.
ನಗರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಚಂದ್ರಯಾನದ ಯಶಸ್ಸಿಗಾಗಿ ಹೋಮ ಹವನ ಹಮ್ಮಿಕೊಳ್ಳಲಾಗಿತ್ತು. ಗವಿ ಗಂಗಾದರೇಶ್ವರ ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಗಿದೆ. ಇವತ್ತು ಇಡೀ ವಿಶ್ವವೇ ದೇಶವನ್ನು ಗಮನಿಸುತ್ತಿದ್ದು, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಸ್ಪರ್ಶಿಸಲಿ ಎಂದು ಪೂಜೆ ಗವಿಗಂಗಾಧರ ಸ್ವಾಮಿಯಲ್ಲಿ ಬೇಡಿಕೊಂಡಿದ್ದಾರೆ.


ಮಂತ್ರಾಲಯದಲ್ಲೂ ಪ್ರಾರ್ಥನೆ
ಚಂದ್ರಯಾನ-3 ಯಶಸ್ಸಿಗೆ ಮೈಸೂರಿನ ಭಕ್ತರು ಮಂತ್ರಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂತ್ರಾಲಯ ರಾಯರ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೈಸೂರು ಬಿಜೆಪಿ ಸದಸ್ಯರು, ಶಾಸಕ ಶ್ರೀವತ್ಸ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವಕ್ಕೆ ಪೂಜೆ ಸಲ್ಲಿಸಿದರು. ಚಂದ್ರಯಾನ ಯಶಸ್ಸಿಗಾಗಿ ಪೂಜೆ ಸಲ್ಲಿಸಲು ಮೈಸೂರಿನಿಂದ 82 ಜನರ ಬಿಜೆಪಿ ನಿಯೋಗ ಮಂತ್ರಾಲಯಕ್ಕೆ ತೆರಳಿದೆ.
ಗದಗ: ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ
ಚಂದ್ರಯಾನ-3 ಯಶಸ್ಸಿಗಾಗಿ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಪಂಡಿತ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಚಂದ್ರಯಾನ-3 ಚಿತ್ರಕ್ಕೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪೂಜೆ ಸಲ್ಲಿಸಿದರು.


ದಾವಣಗೆರೆ ಜನರಿಂದ ಪ್ರಾರ್ಥನೆ
ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಲಿ ಎಂದು ದಾವಣಗೆರೆಯ ಶಾಮನೂರು ಅಂಜನೇಯ ಹಾಗೂ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಜನರು ವಿಶೇಷ ಪೂಜೆ ಸಲ್ಲಿಸಿದರು. ಚಂದ್ರಯಾನ ಯಶಸ್ವಿಗೆ ಮುಂಜಾನೆಯಿಂದಲೇ ಪೂಜೆ ಸಲ್ಲಿಸುತ್ತಿರುವ ನೂರಾರು ಭಕ್ತರು, ಲ್ಯಾಂಡಿಂಗ್ ಯಾವುದೇ ತೊಂದರೆಯಾಗದಂತೆ ದೇವರಲ್ಲಿ ಬೇಡಿಕೊಂಡರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.