ತಿರುವನಂತಪುರ: ಇಂಡಿಯಾದ ಹೆಸರನ್ನು ಬದಲಾಯಿಸುವ ಕೇಂದ್ರದ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಟೀಕಿಸಿದ್ದಾರೆ. ‘ಇದು ದೇಶದ ಬಹುತ್ವವನ್ನು ನಾಶಮಾಡುವ (ಕೇಂದ್ರದಿಂದ) ಪುನರಾವರ್ತಿತ ಪ್ರಯತ್ನಗಳ ಮುಂದುವರಿಕೆಯಾಗಿದೆ. ಈ ಸಂಕುಚಿತ ರಾಜಕಾರಣದ ವಿರುದ್ಧ ಎಲ್ಲ ಜನರು ಪ್ರತಿಭಟಿಸಲು ಸಿದ್ಧರಾಗಬೇಕು’ ಹೇಳಿದ್ದಾರೆ.
‘ಕೇಂದ್ರ ಸರ್ಕಾರದ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ, ಸಂವಿಧಾನವು ತನ್ನ ಮೊದಲ ಅಧ್ಯಾಯದಲ್ಲಿ ನಮ್ಮ ದೇಶವನ್ನು ಇಂಡಿಯಾ, ಅದು ಭಾರತ’ ಎಂದು ವಿವರಿಸುತ್ತದೆ. ಹಾಗೆಯೇ, ಸಂವಿಧಾನದ ಪೀಠಿಕೆಯು ‘ನಾವು, ಇಂಡಿಯಾದ ಜನರು’ (We the People of India) ಎಂದು ಹೇಳುವ ಮೂಲಕ ಪ್ರಾರಂಭವಾಗುತ್ತದೆ. ಕೇಂದ್ರ ಸರ್ಕಾರವು ಸಂವಿಧಾನವನ್ನೇ ನಾಶ ಮಾಡಲು ಇಂಡಿಯಾ ಪದಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ’ ಎಂದು ಕೇರಳ ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ; ‘ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಮಾಡಿದ್ದೇ ಸನಾತನ ಧರ್ಮ’
ರಾಷ್ಟ್ರಪತಿ ಭವನವು ಕಳುಹಿಸಿದ ಜಿ20 ಶೃಂಗಸಭೆಯ ಔತಣಕೂಟದ ಆಹ್ವಾನಗಳಲ್ಲಿ ‘ಪ್ರೆಸಿಡೆಂಡ್ ಆಫ್ ಇಂಡಿಯಾ’ ಎಂದು ಬರೆಯುವ ಬದಲು ‘ಭಾರತದ ಅಧ್ಯಕ್ಷ’ ಎಂದು ಬರೆಯಲಾಗಿದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿವೆ. ಬಿಜೆಪಿ ನೇತೃತ್ವದ ಸರ್ಕಾರವು ಇಂಡಿಯಾ ಕೈಬಿಡುವ ಮತ್ತು ಭಾರತ್ ಎಂದು ಮರುನಾಮಕರಣ ಮಾಡುವ ಗುರಿಯನ್ನು ಹೊಂದಿದೆ ಎಂಬ ಮಾತುಗಳು ಕೇಳಿರುತ್ತಿವೆ.
‘ಇಂಡಿಯಾ ಎಂಬ ಪದಕ್ಕೆ ಏಕೆ ಇಷ್ಟೊಂದು ಭಯ? ಚಿಕ್ಕಂದಿನಿಂದಲೂ ಮಕ್ಕಳಿಗೆ ‘ಭಾರತ ನನ್ನ ದೇಶ’ ಎಂದು ಕಲಿಸಲಾಗುತ್ತದೆ. ಎಲ್ಲ ಭಾರತೀಯರು ನನ್ನ ಸಹೋದರರು ಮತ್ತು ಸಹೋದರಿಯರು ಎಂಬ ಕಲ್ಪನೆಯನ್ನು ಅಳಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅರ್ಥೈಸಬಹುದು’ ಎಂದು ಪಿಣರಾಯಿ ವಿಜಯನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.