ಮೈಸೂರು: ಗತವೈಭವ ನೆನಪಿಸಿಕೊಳ್ಳುವಂತೆ ಈ ಬಾರಿ ದಸರಾ ಮಹೋತ್ಸವ ಆಚರಿಸುತ್ತಿದ್ದೇವೆ. 10 ದಿನಗಳ ಕಾರ್ಯಕ್ರಮ ಒಂದು ನಾಡಹಬ್ಬ. ನಮ್ಮ ನಾಡಿನ ದುಡಿಯುವ ರೈತರು, ಕಾರ್ಮಿಕರು, ಸಾಮಾನ್ಯ ಜನರು ಮನೆಮನೆಗಳಲ್ಲಿ ನಾಡಹಬ್ಬ ಆಚರಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ನಾಡನ್ನು ಸಮೃದ್ಧಿಯಾಗಿಡಲು ನಾವು ಪ್ರಾರ್ಥಿಸುತ್ತೇವೆ ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮಗೆ ಆಶೀರ್ವಾದ, ಶಕ್ತಿ ಕೊಡುತ್ತಾಳೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಇದು ನಮ್ಮ ಸೌಭಾಗ್ಯ. ಚಾಮುಂಡಿ ಬೆಟ್ಟದಲ್ಲಿ ಇವತ್ತು ಸ್ಥಾಪನೆಯಾಗಿರುವ ತಾಯಿಯ ಶಕ್ತಿಪೀಠವು ನಾಡಿಗೆ ಶಕ್ತಿ ಕೊಡುವ ಒಂದು ಸಂಚಲನವನ್ನು ಉಂಟು ಮಾಡಿದೆ. ಮೈಸೂರು ಮಹಾರಾಜರ ಕಾಲದಿಂದ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ಮೇಲೆ ಮುಂದುವರಿಸಿಕೊಂಡು ಹೋಗಿದ್ದೇವೆ. ಗತಕಾಲದ ವೈಭವದ ಜೊತೆಗೆ ಇಂದಿನ ಪ್ರಸ್ತುತ ಕಾಲದ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ಧಿಯೂ ಅಷ್ಟೇ ಮುಖ್ಯ. ಹತ್ತು ಹಲವು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನಕಲ್ಯಾಣದ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ. ನಾವು ಆಹ್ವಾನಿಸಿದ ತಕ್ಷಣ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಕೊಂಡರು. ದೇಶದ ಶ್ರೇಯೋಭಿವೃದ್ಧಿಗೆ ಅವರು ಚಾಮುಂಡೇಶ್ವರಿಗೆ ನಮನ ಸಲ್ಲಿಸಿದರು. ಅವರಿಗೆ ದೈವಭಕ್ತಿಯಿದೆ. ದುಷ್ಟರ ಸಂಹಾರ-ಶಿಷ್ಟರ ಪಾಲನೆ ನಾಡಹಬ್ಬದ ಆಶಯ. ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು. ಒಳ್ಳೆಯ ವಿಚಾರಗಳಿಗೆ ಪುರಸ್ಕಾರ ಕೊಟ್ಟು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡಬೇಕು. ಆ ಸಂಕಲ್ಪದೊಂದಿಗೆ ನಾವು ಮುಂದೆ ಹೆಜ್ಜೆ ಹಾಕುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಇವತ್ತು ಹಂಸ ಏರಿದ್ದಾಳೆ. ಹಂಸವೆಂದರೆ ಶುದ್ಧ ಎಂದು ಅರ್ಥ. ಅದು ಅತ್ಯಂತ ದೊಡ್ಡ ಹಾಗೂ ತೂಕದ ಪಕ್ಷಿ. ಆದರೂ ಅತ್ಯಂತ ಎತ್ತರಕ್ಕೆ ಹಾರಬಲ್ಲದು. ಹಿಮಾಲಯ, ಮಾನಸ ಸರೋವರಗಳಲ್ಲಿ ಅದು ಸಂಚರಿಸುತ್ತದೆ. ವಿಚಾರಗಳಲ್ಲಿ ಶುದ್ಧತೆ, ತೂಕದ ನಡವಳಿಕೆ ಮತ್ತು ಎತ್ತರದ ಚಿಂತನೆಗಳಿದ್ದರೆ, ಭಾವನೆಗಳಿದ್ದರೆ, ಶುದ್ಧ ಮನಸ್ಸು ಇದ್ದರೆ ಮಾನಸ ಸರೋವರದ ಎತ್ತರ ಮುಟ್ಟಬಹುದು ಎಂಬುದನ್ನು ಇದು ಸೂಚಿಸುತ್ತದೆ. ಕನ್ನಡ ನಾಡನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಎಲ್ಲ ರೀತಿಯಲ್ಲಿಯೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಿದ್ದೇವೆ. ಈ ವರ್ಷ ಕೊವಿಡ್ನಂತಹ ಆತಂಕಗಳಿಂದ ನಾಡನ್ನು ದೂರ ಇರಿಸಿ, ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆಶೀರ್ವಾದ ಮಾಡಲಿ ಎಂದು ಶಕ್ತಿ ದೇವತೆಯನ್ನು ಪ್ರಾರ್ಥಿಸುತ್ತೇನೆ. ರಾಷ್ಟ್ರಪತಿಗೆ ಸಮಸ್ತ ಕನ್ನಡ ನಾಡಿನ 6 ಕೋಟಿ ಜನರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಭಾಷಣ ಮುಗಿಸಿದರು. ಒಟ್ಟಾರೆ ಈ ಬಾರಿಯ ದಸರಾ ಉದ್ಘಾಟನೆಯ ಭಾಷಣ ಕೇವಲ ಮೂರು ಜನರಿಗೆ ಮಾತ್ರ ಸೀಮಿತವಾಗಿದತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜಪಾಲರಾದ ಥಾವರ್ಚಂದ್ ಗೆಹ್ಲೋಟ್ ಹಾಗೂ ಸಿಎಂ ಬೊಮ್ಮಾಯಿ ಮಾತ್ರ ಮಾತನಾಡಿ ಉದ್ಘಟನಾ ಕಾರ್ಯಕ್ರಮವನ್ನ ಮೊಟಕುಗೊಳಿಸಲಾಯಿತು.