ನವದೆಹಲಿ: ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮೊದಲು ಅವರ ಪಕ್ಷವನ್ನು ಅವರು ಸರಿ ಮಾಡಿಕೊಳ್ಳಲಿ ಎಂದು ಸಿಎಂ ಬೊಮ್ಮಾಯಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಸಿಎಂ, ಯಾರಿಗೂ ಬರದೇ ಇರುವ ಸುದ್ದಿಗಳು ಅವರಿಗೆ ಬರಲಿವೆ. ಅವರಿಗೆ ಯಾವಾಗ ಏನು ಕನಸುಗಳು ಬರಲಿಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮದುವೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದೇವೆ. ಈ ಭೇಟಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಭೇಟಿ ಮಾಡಲ್ಲ. ಮದುವೆ ಕಾರ್ಯಕ್ರಮವಾದ ಕಾರಣ ಇತರ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸಚಿವರ ಭೇಟಿ ಸಹ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಯಾವ ಬ್ರಾಹ್ಮಣರು, ಇನ್ನಿತರ ಸಮುದಾಯದವರು ಇದೆಲ್ಲದರ ಬಗ್ಗೆ ಜನ ನೋಡುವುದಿಲ್ಲ. ಇವೆಲ್ಲ ಮಾತುಗಳು ರಾಜಕಾರಣಗಳಿಗೆ ಅಪ್ರಸ್ತುತ , ನಮ್ಮ ಪಕ್ಷಗಳು, ನಮ್ಮ ಕಾರ್ಯಕ್ರಮಗಳು ಏನೆಲ್ಲ ಮಾಡಲು ಸಾಧ್ಯವೋ ಇವುಗಳ ಬಗ್ಗೆ ಮಾತನಾಡಿದರೆ ಜನ ಬಹಳಷ್ಟು ಚಿಂತನೆ ಮಾಡುತ್ತಾರೆ ಎಂದರು.