ಬೆಂಗಳೂರು: ಶಿವಾಜಿನಗರದಲ್ಲಿ ಗೆದ್ದರೆ, ರಾಜ್ಯದಲ್ಲಿ ನೂರಕ್ಕೆ ನೂರು ಬಿಜೆಪಿ ಗೆಲ್ಲಲಿದೆ. ಹಾಗಾಗಿ ಈ ಕ್ಷೇತ್ರದ ಗೆಲುವಿಗೆ ಕಂಕಣತೊಡುವಂತೆ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಬೆಂಗಳೂರಿನ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಮಗೆ ಶಿವಾಜಿನಗರ ಗೆಲುವು ಅಸಾಧ್ಯವಲ್ಲ, ಈಗಾಗಲೇ ಗೆದ್ದಿದ್ದ ಕ್ಷೇತ್ರವೇ ಇದು, ಈಗ ಕೈತಪ್ಪಿದೆ. ಹಾಗಾಗಿ ಶಿವಾಜಿನಗರ ಕ್ಷೇತ್ರದ ವಿಜಯ ಪತಾಕೆಗೆ ಬಂದಿದ್ದೇನೆ, ಶಿವಾಜಿನಗರ ಕ್ಷೇತ್ರದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟು, ಕ್ಷೇತ್ರದ ಅಭಿವೃದ್ಧಿಗೂ ಅತಿ ಹೆಚ್ಚು ಗಮನ ಕೊಡುತ್ತೇನೆ ಎಂದರು.
ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಟ ಮಾಡ್ತಿದೆ. ಆದರೆ ಬಿಜೆಪಿ ಭಾರತದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿದೆ. ಇವತ್ತು ಮುಳುಗುವ ಹಡಗು ಆಗುತ್ತಿದೆ. ಅವರು ಜನರ ಬಗ್ಗೆ ಯಾವತ್ತಿಗೂ ಯೋಚನೆ ಮಾಡಿಲ್ಲ. ಬಿಜೆಪಿ ಯಾವತ್ತಿಗೂ ಅಸ್ತಿತ್ವದ ಬಗ್ಗೆ ಯೋಚನೆ ಮಾಡಿಲ್ಲ. ನಾವು ಜನರ ರಾಜಕಾರಣ ಮಾಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಬೂತ್ ಮಟ್ಟದ ವಿಜಯ ಸಾಧನೆ ಮಾಡಲು ಈ ಅಭಿಯಾನಕ್ಕೆ ಚಾಲನೆ ಕೊಡುತ್ತಿದ್ದೇವೆ.ಬೂತ್ ಗಟ್ಟಿ ಆದರೆ ಕ್ಷೇತ್ರ ಶಕ್ತಿ ಯಾಗಿ, ರಾಜ್ಯ ಗೆಲ್ಲುತ್ತದೆ. ಶಿವಾಜಿನಗರದಲ್ಲಿ ಕಳೆದ ಬಾರಿ 13 ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಈ ಬಾರಿ 13 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.
ಬಿಜೆಪಿ ಕೇವಲ ಅಧಿಕಾರಕ್ಕಾಗಿ ಮಾತ್ರ ರಾಜಕಾರಣ ಮಾಡುತ್ತಿಲ್ಲ, ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ರಾಜಕಾರಣ ಮಾಡುತ್ತಿದೆ. ಜನರ ಸುತ್ತಲೂ ಅಭಿವೃದ್ಧಿ ಆಗಬೇಕೇ ಹೊರತು, ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಕಾಂಗ್ರೆಸ್ ಯಾವತ್ತಿಗೂ ಪವರ್ ಪಾಲಿಟಿಕ್ಸ್ ಮಾಡಿಕೊಂಡು ಬಂದಿದೆ ಎಂದು ದೂರಿದರು.