ಬೆಂಗಳೂರು: ‘ಜ್ಞಾನಯೋಗಿ ಸಿದ್ದೇಶ್ವರ ಗುರುಗಳು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಅವರ ಪ್ರವಚನದಲ್ಲಿ ಎಷ್ಟು ಶಾಂತಿ ಇತ್ತೋ ಅಷ್ಟೇ ಶಾಂತಿ ಮತ್ತು ಗೌರವದಿಂದ ಅವರ ಅಂತಿಮ ಯಾತ್ರೆ ಮಾಡೋಣ’ ಎಂದು ಸಿಎಂ ಬಸವರಾಜಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ಅವರ ಪ್ರವಚನದಲ್ಲಿ ನೀವು ಎಷ್ಟು ಶಾಂತಿಯಿಂದ ಇರುತ್ತಿದ್ದೀರೋ, ಅಷ್ಟೇ ಶಾಂತಿಯುತವಾಗಿ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಹಾಗಾದಲ್ಲಿ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗಲಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಗೌರವದಿಂದ ಭಕ್ತಿ ಭಾವದಿಂದ ನಾವೆಲ್ಲರೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸೋಣ’ ಎಂದು ಮನವಿ ಮಾಡಿದ್ದಾರೆ.
ಸ್ಥಳೀಯ ಭಕ್ತ ಸಮೂಹ ಸಿದ್ದೇಶ್ವರ ಶ್ರೀಗಳ ಮಾತಿನಂತೆ ನಡೆದುಕೊಳ್ಳುತ್ತಿದೆ. ಎಲ್ಲ ರೀತಿಯ ಸಹಕಾರ ನೀಡುತ್ತಿರುವ ವಿಜಯಪುರ ಜನತೆಗೆ ಧನ್ಯವಾದ. ಬರುವ ಭಕ್ತರೂ ಕೂಡ ಶಾಂತಿ ಸಂಯಮದಿಂದ ಸ್ವಾಮೀಜಿಗಳ ಅಂತ್ಯಸಂಸ್ಕಾರಕ್ಕೆ ಸಹಕಾರ ನೀಡಬೇಕು’ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್, ಎಂಬಿ ಪಾಟೀಲ್ ಸೇರಿದಂತೆ ಜನಪ್ರತಿನಿಧಿಗಳೆಲ್ಲರೂ ಬಹಳ ಅಚ್ಚುಕಟ್ಟಾಗಿ ಜನರಿಗೆ ದರ್ಶನ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಬಹಳ ದೊಡ್ಡ ಪ್ರಮಾಣದಲ್ಲಿ ಸಹಕಾರ ಕೊಡುತ್ತಿದ್ದಾರೆ ಎಂದರು.
‘ಆಧುನಿಕ ಕಲಿಯುಗದಲ್ಲಿ ತ್ಯಾಗ, ಸತ್ಯವನ್ನು ಪ್ರತಿಪಾದನೆ ಮಾಡಿದಂತಹ ಒಬ್ಬ ಸಂತನನ್ನು ನಾವು ಇಂದು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಭಕ್ತ ಸಮೂಹ ದುಃಖದಲ್ಲಿ ಮುಳುಗಿದೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕತನ ಎನ್ನುವ ವಿವೇಕಾನಂದರ ಮಾತಿನಂತೆ ಸ್ವಾಮೀಜಿಗಳ ವಿಚಾರದಲ್ಲಿ, ತತ್ವ ಸಿದ್ಧಾಂತಗಳಲ್ಲಿ ಅವರ ಮಾತುಗಳಲ್ಲಿ, ನಡೆ-ನುಡಿಯಲ್ಲಿ ಅವರು ಬದುಕಿದ ರೀತಿಯನ್ನು ತೋರಿಸುತ್ತದೆ. ಅವರು ಸದಾ ನಮಗೆ ಮಾರ್ಗದರ್ಶಕರಾಗಿ ನಮ್ಮೊಂದಿಗೆ ಇರಲಿದ್ದಾರೆ ಎಂಬ ನಂಬಿಕೆ ಇದೆ’ ಎಂದರು.