ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ಜನರಿಗೆ ಎಲ್ಲವೂ ಗೊತ್ತಿದ್ದು, ಕಾಂಗ್ರೆಸ್ ನವರಿಂದ ನಾವು ಪಾಠ ಕಲಿಯಬೇಕಿಲ್ಲ ,ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ನವರು ನಮ್ಮ ವಿರುದ್ದ ಒಂದು ದೂರು ಕೊಟ್ಟರೇ ನಾವು ಅವರ ವಿರುದ್ದ ಈ ರೀತಿ ನೂರು ದೂರುಗಳನ್ನು ನೀಡಬಹುದು ಎಂದರು. ಕಾಂಗ್ರೆಸ್ ನ ನಾಲ್ಕೈದು ಶಾಸಕರು ಅವರ ಚಿತ್ರವುಳ್ಳ ಕುಕ್ಕರ್ ಮತದಾರರಿಗೆ ಕೊಟ್ಟಿರುವುದು ಸಾಕ್ಷಿ ಸಮೇತ ದೊರೆತಿದೆ. ಈ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು ತನಿಖೆ ಮಾಡಿಸುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ಎರಡು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಉಚಿತ ವಿದ್ಯುತ್ ನೀಡುವುದಾಗಿಯೂ ಘೋಷಿಸಿದ್ದು, ಪ್ರತಿದಿನ ಒಂದೊಂದೇ ಪ್ರಕಟಿಸುತ್ತಿದ್ದಾರೆ. ಈ ಮಾನದಂಡ ಹಾಕಿದರೆ ಅವರೂ ಕೂಡ ಅಪರಾಧಿಗಳಾಗುವುದಿಲ್ಲವೇ? ಅವರೂ ಕೂಡ ಮತದಾರರಿಗೆ ಆಸೆ, ಆಮಿಷಗಳನ್ನು ನೀಡುತ್ತಿಲ್ಲವೇ? ಎಂದು ಸಿಎಂ ಪ್ರಶ್ನಿಸಿದರು.