ಕಲಬುರಗಿ : ಕಾಂಗ್ರೆಸ್ ಪಕ್ಷಕ್ಕೆ ಗುರುನೂ ಇಲ್ಲ, ಗುರಿಯೂ ಇಲ್ಲ. ಪ್ರಾದೇಶಿಕ ಪಕ್ಷಗಳನ್ನು ಕೊಲ್ಲಲು ಸಾಕಷ್ಟು ಪ್ರಯತ್ನ ಮಾಡಿದ ಕಾಂಗ್ರೆಸ್ ಇಂದು ಹೀನಾಯ ಸೋಲು ಅನುಭವಿಸಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಲೇವಡಿ ಮಾಡಿದರು. ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ಪಕ್ಷ, ಡ್ರೈವರ್ ಇಲ್ಲದ ಬಸ್ ತರಹ ಆಗಿದೆ ಎಂದರು.
ಬಿಜೆಪಿ ಅಂಗಾಂಗಗಳು ಕುಸಿದು ಬಿದ್ದಿದ್ದು, ಈ ಚುನಾವಣೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲೆಗೆ ಹೋಗುತ್ತಾರೆ. ಆರ್ಎಸ್ಎಸ್ ಆಂತರಿಕ ಸರ್ವೇಯ ಪ್ರಕಾರ ಬಿಜೆಪಿ ಪಕ್ಷ 50 ಸ್ಥಾನ ದಾಟುವುದಿಲ್ಲ ಎಂದಿದೆ ಎಂದು ಟೀಕಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನೆಲಕಚ್ಚಿಕೊಳ್ಳಲಿವೆ. ಅದೇ ರೀತಿ ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸಹ ಸ್ವಂತ ಬಲದ ಮೇಲೆ 100 ಸ್ಥಾನಗಳನ್ನು ದಾಟಿ ಜೆಡಿಎಸ್ ಅಧಿಕಾರ ಪಡೆದು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು.