ಬೆಂಗಳೂರು : ಪುನೀತ್ ರಾಜ್ಕುಮಾರ್ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಮನದಾಳದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಮಾತನಾಡಿದ ಸಿಎಂ , ಎಲ್ಲೇ ಹೋದರೂ ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಪೂಜೆ ಮಾಡಿರುವುದನ್ನು ನಾವು ನೋಡ್ತೀವಿ. ಮಾನವೀಯತೆ ಇರುವ ವ್ಯಕ್ತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದಾಗ ಅದರ ಪ್ರಭಾವ ಜನರ ಮೇಲೆ ಇರುತ್ತದೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ ಎಂದರು.
ಇದುವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವವರನ್ನು ಸಂಪರ್ಕ ಮಾಡಿ ಕನ್ನಡ ನಾಡನ್ನು ಹೇಗೆಲ್ಲಾ ಕಟ್ಟಬಹುದು ಎನ್ನುವ ಅವರ ಅಭಿಪ್ರಾಯ ಪಡೆದುಕೊಳ್ಳುವ ಕೆಲಸ ಆಗಬೇಕು. ವ್ಯತಿರಿಕ್ತ ಪಡಿಸ್ಥಿತಿಯಲ್ಲೂ ಅವರು ಗಟ್ಟಿಯಾಗಿ ನಿಂತು ಸಾಧನೆ ಮಾಡಿದ್ದರ ಅವರ ಅನುಭವ ಮತ್ತು ಸಂದೇಶದ ಒಂದು ಮಾರ್ಗದರ್ಶಿ ಕೃತಿ ಹೊರತರಲಾಗುವುದು.
ನಾಡು ಕಟ್ಟಲು ಅಭಿಪ್ರಾಯದ ಸಾಮ್ಯತೆ ಬರುವ ಅವಶ್ಯಕತೆ ಇದೆ. ನಾಡು ಕಟ್ಟುವ ವಿಚಾರದಲ್ಲಿ ಒಂದಾಗಬೇಕು. ಜನರನ್ಮು ಫಲಾನುಭವಿಗಳಾಗಿ ಮಾಡದೇ ಅವರನ್ನು ಪಾಲುದಾರರನ್ನಾಗಿ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಮಸ್ತ ಕನ್ನಡ ನಾಡಿನ ಜನರ ಆಶೀರ್ವಾದ ಅಗತ್ಯ ಇದೆ. ಕನ್ನಡ ನಾಡಿನಲ್ಲಿ ಹುಟ್ಡಿರುವ ನಾವು ಪುಣ್ಯವಂತರು. ಮತ್ತೊಂದು ಜನ್ಮ ಇದ್ದರೆ ಅದು ಕನ್ನಡ ನಾಡಿನಲ್ಲೇ ಇರಲಿ ಎಂದರು.