ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜಂಟಿ ನೇತೃತ್ವದಲ್ಲಿ ‘ಪ್ರಜಾಧ್ವನಿ ಯಾತ್ರೆ’ 11 ರಿಂದ ಆರಂಭವಾಗಲಿದೆ.
ಜ.11ರಿಂದ ಜ.28ರವರೆಗೆ ಒಟ್ಟು 10 ದಿನಗಳ ಕಾಲ ನಡೆಯುವ ಪ್ರವಾಸವನ್ನು ರಾಜ್ಯದ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರೂ ಒಗ್ಗಟ್ಟಾಗಿ ನಡೆಸಲಿದ್ದು, ಈ ವೇಳೆ 20 ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಲಿದ್ದಾರೆ. ಜ.11ರಂದು ಬೆಳಗ್ಗೆ 8.30 ಗಂಟೆಗೆ ಬೆಳಗಾವಿಯಿಂದ ಬಸ್ ಯಾತ್ರೆ ಅಧಿಕೃತವಾಗಿ ಶುರುವಾಗಲಿದೆ. ಮೊದಲ ದಿನ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಸಿದ ಬಳಿಕ ಜ.12 ರಿಂದ 16 ರವರೆಗೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಬಿಡುವು ನೀಡಲಾಗುತ್ತದೆ.
ಬಳಿಕ ಜ.17 ರಂದು ಹೊಸಪೇಟೆ ಹಾಗೂ ಸಂಜೆ ಕೊಪ್ಪಳದಲ್ಲಿ ಸಮಾವೇಶ, ಜ.18 ರಂದು ಬಾಗಲಕೋಟೆ ಹಾಗೂ ಅಂದು ಸಂಜೆ ಗದಗ, ಜ.19 ರಂದು ಬೆಳಗ್ಗೆ ಹಾವೇರಿ, ಸಂಜೆ ದಾವಣಗೆರೆಯಲ್ಲಿ ಸಮಾವೇಶ ನಡೆಸಲಾಗುತ್ತದೆ.
ನಂತರ 2 0 ರಿಂದ 28 ರವರೆಗೆ ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಕೋಲಾರ, ತುಮಕೂರು, ದೊಡ್ಡಬಳ್ಳಾಪುರ, ಮಂಡ್ಯ, ರಾಮನಗರದಲ್ಲಿ ಸಮಾವೇಶ ನಡೆಯಲಿದೆ. ಬಳಿಕ ಜ.28ರಂದು ಬೆಳಗ್ಗೆ ಯಾದಗಿರಿ ಹಾಗೂ ಸಂಜೆ ಬೀದರ್ನಲ್ಲಿ ಸಮಾವೇಶ ನಡೆಸಿ ಯಾತ್ರೆ ಮುಕ್ತಾಯವಾಗಲಿದೆ ಎಂದು ಎಂದು ತಿಳಿದುಬಂದಿದೆ.