ಕೋಲಾರ : ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ ಬಳಿಕ ಕೋಲಾರ ಜಿಲ್ಲೆಯ ರಾಜಕಾರಣ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರಕ್ಕೆ ಸಿದ್ದರಾಮಯ್ಯ ಬರುವುದಾದರೇ ಇರುವುದಕ್ಕೆ ಒಂದು ಸೂರು ಬೇಕಲ್ಲ, ಅದಕ್ಕಾಗಿ ಒಂದು ಮನೆ ಹಾಗೂ ಕಚೇರಿ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ.
ಪಿ.ಸಿ.ಬಡಾವಣೆ, ಬೈರೇಗೌಡ ನಗರ ಸುತ್ತಮುತ್ತ ಮನೆ ಹಾಗೂ ಕಚೇರಿ ಹುಡುಕಾಟವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಕೊನೆಯ ಚುನಾವಣೆ ಕೋಲಾರದಲ್ಲಿ ಖಚಿತವಾಗಿದ್ದು, ಕಾಂಗ್ರೆಸ್ ನಾಯಕರು ಜನರನ್ನು ಸೆಳೆಯಲು ಮುಂದಾಗಿದ್ದಾರೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಕೋಲಾರವೂ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ.
ಇದೇ ತಿಂಗಳ 23ರಂದು ಕಾಂಗ್ರೆಸ್ನಾಯಕರು ಕೋಲಾರದಲ್ಲಿ ಬಸ್ ಯಾತ್ರೆ ಮಾಡಲಿದ್ದು, ಈ ಸಂದರ್ಭದಲ್ಲಿ ಕಚೇರಿ ಉದ್ಘಾಟನೆ ಮಾಡಿಸುವ ವಿಶ್ವಾಸದಲ್ಲಿದ್ದಾರೆ. ಕೋಲಾರ ಪ್ರವಾಸ ಕೈಗೊಂಡ ವೇಳೆ ತಂಗಲು ಮನೆ ಹಾಗೂ ಸಾರ್ವಜನಿಕರನ್ನು ಸಂಪರ್ಕ ಮಾಡಲು ಕಚೇರಿ ಅವಶ್ಯಕ ಎನ್ನುವುದನ್ನು ಅರಿತ ಕಾಂಗ್ರೆಸ್ ನಾಯಕರು ಮನೆ, ಕಚೇರಿ ಮಾಡಲು ಸಿದ್ಧತೆಯಲ್ಲಿದ್ದಾರೆ.