ಬೆಂಗಳೂರು: ಕರ್ನಾಟಕಕ್ಕೆ ಪ್ರಿಯಾಂಕಾ ಗಾಂಧಿ ಜನವರಿ 16ರಂದು ಬರಲಿದ್ದಾರೆ. ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಸಮಾವೇಶಕ್ಕೆ ಕರೆ ತರುವಂತೆ ನಿರ್ದೇಶನ ಕೊಡಲಾಗಿದೆ.
ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಜಿಲ್ಲೆಗಳಿಂದ ಹೆಚ್ಚು ಜನರಿಗೆ ಆಗಮಿಸುವಂತೆಯೂ ತಿಳಿಸಲಾಗಿದೆ. ಡಿಸಿಸಿ ಅಧ್ಯಕ್ಷರು, ಶಾಸಕರು, ಸಂಸದರಿಗೆ ಈ ಸಂಬಂಧ ಡಿಕೆಶಿ ಹೊಣೆ ಹೊರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಮಹಿಳೆಯರ ಸಮಸ್ಯೆಗಳು, ಎಲ್ಲ ಹಂತದ ಮಹಿಳೆಯರ ಸಾಮಾಜಿಕ, ಆರ್ಥಿಕ, ರಾಜಕೀಯ ಸಬಲೀಕರಣ ಅದಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಪಟ್ಟಿ ಮಾಡಿ ಕೊಡಿ ಎಂದು ಡಿಕೆಶಿ ಈಗಾಗಲೇ ಸೂಚನೆ ನೀಡಿದ್ದಾರೆ. ಸಮಾವೇಶದಲ್ಲಿ ಈ ಕುರಿತು ಮಾಹಿತಿ ಘೋಷಣೆಯಾಗುವ ಸಾಧ್ಯತೆ ಇದೆ.
ಡಿಸಿಸಿ ಅಧ್ಯಕ್ಷರು, ಶಾಸಕರು, ಸಂಸದರು, ಮಾಜಿ ಶಾಸಕರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಸೂಚನೆ ನೀಡಿದ್ದು, ಅವರು ಮಾಹಿತಿ ಕಲೆ ಹಾಕಿ ವಿವರ ಸಲ್ಲಿಸಲಿದ್ದಾರೆ. ಮಹಿಳೆಯರ ಸಬಲೀಕರಣ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಅಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ ಆಯೋಜಿಸಿದೆ.
ಯುವ ಸಮುದಾಯ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಪಕ್ಷದ ತನ್ನ ತತ್ವ ಸಿದ್ಧಾಂತ ಮನದಟ್ಟು ಮಾಡಿಸುವ ಉದ್ದೇಶದಿಂದ ಪ್ರಿಯಂಕಾ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಸಲಾಗುತ್ತಿದೆ. ಈ ಮೂಲಕ ಯುವ ಹಾಗೂ ಮಹಿಳಾ ಮತದಾರರನ್ನು ಪಕ್ಷದೆಡೆಗೆ ಸೆಳೆಯುವ ಗುರಿ ಹೊಂದಲಾಗಿದೆ ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕ ಭಾಗದ ಪ್ರತಿ ಬೂತ್ನಿಂದ ತಲಾ ಇಬ್ಬರು ಮಹಿಳೆಯರು ಬರುವಂತೆ ನೋಡಿಕೊಳ್ಳಲಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದ ಪ್ರತಿ ಬೂತ್ ನಿಂದ ತಲಾ ಮೂವರು ಮಹಿಳೆಯರನ್ನು ಕಡ್ಡಾಯವಾಗಿ ಕರೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.