ಬೆಳಗಾವಿ: ಬಸ್ಯಾತ್ರೆ ಜೊತೆಗೆ, ಕೃಷ್ಣಾ, ಮಹದಾಯಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಬಗ್ಗೆ ಡಿ.30ರಂದು ವಿಜಯಪುರ, ಜ.2 ರಂದು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು. ಜ.8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್ಸಿ, ಎಸ್ಟಿಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ರಾಜ್ಯವ್ಯಾಪಿ ಬಸ್ ಯಾತ್ರೆಗೆ ಜ.11ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದರು.ಜ.10 ರಂದು ಬೆಳಗಾವಿಗೆ ಪಕ್ಷದ ಎಲ್ಲ ನಾಯಕರು ಆಗಮಿಸಲಿದ್ದು, ಜ.11ರಂದು ಬಸ್ ಯಾತ್ರೆಗೆ ಚಾಲನೆ ನೀಡಲಾಗುವುದು. ಅಂದೇ ಬೆಳಗಾವಿ, ಚಿಕ್ಕೋಡಿಗಳಲ್ಲಿ ಸಭೆ ನಡೆಸಲಾಗುವುದು ಎಂದರು. ಜೊತೆಗೆ ಜ.1 ರಿಂದ 31 ರೊಳಗೆ ಪ್ರತಿಯೊಂದು ಬೂತ್ನಲ್ಲಿ ಕಾರ್ಯಕರ್ತರು, ಮುಖಂಡರು ಪಕ್ಷದ ಧ್ವಜ ಹಾರಿಸಿ, ಸಭೆ ನಡೆಸಬೇಕು.
ಕೇಂದ್ರ, ರಾಜ್ಯ ಸರ್ಕಾರದ ದುರಾಡಳಿತ, ಅನ್ಯಾಯದ ಕುರಿತು ಜನತೆಗೆ ಅರಿವು ಮೂಡಿಸಬೇಕು. ಬಳಿಕ ಜಿಲ್ಲಾಮಟ್ಟದಲ್ಲಿಯೂ ಪದಾಧಿಕಾರಿಗಳು, ರಾಜ್ಯಮಟ್ಟದ ನಾಯಕರು, ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಮಾತ್ರ ಕಾಂಗ್ರೆಸ್ ಅಧಿವೇಶನ ನಡೆದಿದೆ. ಸ್ವಾತಂತ್ರ್ಯ ಬಂದ ಇತಿಹಾಸವಿದೆ. ರಾಜ್ಯದಲ್ಲಿ ಮತ್ತೆ ಜನಪರವಾದ ಕಾಂಗ್ರೆಸ್ ಬರಬೇಕಿದೆ ಎಂದು ಹೇಳಿದರು.