Site icon Political 360

G20 Summit : ದೆಹಲಿ ಘೋಷಣೆಗೆ ಒಮ್ಮತದ ಅಂಗೀಕಾರ: ಇದು ಭಾರತಕ್ಕೆ ಸಿಕ್ಕ ಜಯ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಜಿ20 ನಾಯಕರು ದೇಶಗಳ ಜಂಟಿ ಘೋಷಣೆಯನ್ನು ಇಂದು ಅಂಗೀಕರಿಸಿದ್ದಾರೆ.

ಯಾವುದೇ ತಕರಾರು ಇಲ್ಲದೆ ದೆಹಲಿ ಘೋಷಣೆ (Delhi Declaration) ಅಂಗೀಕರಿಸಿರುವ ಜಿ20 ನಾಯಕರ ತೀರ್ಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಜಂಟಿ ಘೋಷಣೆಯನ್ನು ಸಿದ್ಧಪಡಿಸಿ, ಅಂಗೀಕಾರವಾಗುವಂತೆ ಶ್ರಮಿಸಿದ ತಂಡವನ್ನು ಪಿಎಂ ಮೋದಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ‘ಭಾರತ ಮಂಟಪ’ದಲ್ಲಿ ಗಮನ ಸೆಳೆದ ಕೋನಾರ್ಕ್ ಚಕ್ರ; ಏನಿದು ಗೊತ್ತಾ?

ಈ ಬಗ್ಗೆ ಮಾತನಾಡಿದ ಪಿಎಂ ನರೇಂದ್ರ ಮೋದಿ, “ನನಗೆ ಒಳ್ಳೆಯ ಸುದ್ದಿ ದೊರಕಿದೆ. ನಮ್ಮ ತಂಡದ ಕಠಿಣ ಪರಿಶ್ರಮದ ಫಲವಾಗಿ, ಹೊಸದಿಲ್ಲಿ ಜಿ20 ನಾಯಕರ ಶೃಂಗ ಘೋಷಣೆಯಲ್ಲಿ ಸಹಮತ ನಿರ್ಮಾಣವಾಗಿದೆ. ಈ ನಾಯಕತ್ವ ಘೋಷಣೆಯನ್ನು ಅಂಗೀಕರಿಸುವುದು ನನ್ನ ಪ್ರಸ್ತಾಪವಾಗಿತ್ತು. ಈ ಘೋಷಣೆಯ ಅಂಗೀಕಾರವನ್ನು ನಾನು ಪ್ರಕಟಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ಶೆರ್ಪಾ, ಸಚಿವರು, ಇದಕ್ಕಾಗಿ ಸಾಕಷ್ಟು ಶ್ರಮವಹಿಸಿದ ಹಾಗೂ ಇದನ್ನು ಸಾಧ್ಯವಾಗುವಂತೆ ಮಾಡುವಲ್ಲಿ ಕೆಲಸ ಮಾಡಿದವರನ್ನು ನಾನು ಅಭಿನಂದಿಸುತ್ತೇನೆ” ಎಂದು ತಿಳಿಸಿದ್ದಾರೆ.

ಶೃಂಗಸಭೆಯ ಎರಡನೇ ಅವಧಿಯಲ್ಲಿ ಮೋದಿ ಅವರು ದಿಲ್ಲಿ ಘೋಷಣೆ ಅಂಗೀಕಾರವನ್ನು ಪ್ರಕಟಿಸಿದರು. ಇದಕ್ಕೆ ಸದಸ್ಯರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಸುಮಾರು 150 ಗಂ ಟೆಗಳ ತೀವ್ರ ಸಮಾಲೋಚನೆ ಬಳಿಕ, ಜಿ20 ದೇಶಗಳ ಸಂಧಾನಕಾರರು ಉಕ್ರೇನ್ ಸಂಘರ್ಷದ ಕುರಿತಾದ ಘೋಷಣೆಯನ್ನು ಅಂತಿಮಗೊಳಿಸಿದ್ದರು.

ಇನ್ನು ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ರಷ್ಯಾ- ಉಕ್ರೇನ್ ಯುದ್ಧ ವಿಚಾರ ಸೇರಿದಂತೆ ಘೋಷಣೆಯ ಪೂರ್ಣ ಪಠ್ಯಕ್ಕೆ ಶೇ 100ರಷ್ಟು ಒಮ್ಮತದ ಒಪ್ಪಿಗೆ ವ್ಯಕ್ತವಾಗಿದೆ. ಎಲ್ಲಾ ಸಮಸ್ಯೆಗಳ ಕುರಿತೂ ಒಪ್ಪಂದವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಜಿ20ಗೆ ನನಗೆ ಆಹ್ವಾನ ಬಂದಿಲ್ಲ : ಮಲ್ಲಿಕಾರ್ಜುನ ಖರ್ಗೆ

ದೆಹಲಿ ಘೋಷಣೆಯ ಐದು ಪ್ರಮುಖ ವಿಷಯಗಳು

ಜಿ7 ದೇಶಗಳು ಮತ್ತು ರಷ್ಯಾ ಹಾಗೂ ಚೀನಾ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಇದಕ್ಕೆ ಅನುಮೋದನೆ ದೊರಕಿದೆ. ಕಠಿಣ ಸಂಧಾನ ಮಾತುಕತೆ ಬಳಿಕ ಈ ಒಪ್ಪಂದ ಸಿದ್ಧಪಡಿಸಲಾಗಿದೆ. ಇದು ಐತಿಹಾಸಿಕ ಒಪ್ಪಂದ. ಎಲ್ಲಾ 20 ಸದಸ್ಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ಭಾರತದ ಅಧಿಕಾರಿ ಅಮಿತಾಬ್ ಕಾಂತ್ ಹೇಳಿದ್ದಾರೆ.

ಜಿ20 ಶೃಂಗದಲ್ಲಿ ಭೂ ರಾಜಕೀಯ ವಿಚಾರಗಳೇ ಪ್ರಮುಖವಾಗಿ ಮುನ್ನೆಲೆಗೆ ಬರುತ್ತಿರುವ ನಡುವೆ ಅಭಿವೃದ್ಧಿ ವಿಷಯಗಳ ಕುರಿತು ಗಮನ ಹರಿಸುವ ಘೋಷಣೆಗೆ ಅಂಗೀಕಾರ ದೊರಕಿರುವುದು ಭಾರತಕ್ಕೆ ದೊಡ್ಡ ಗೆಲುವು ಎಂದು ವ್ಯಾಖ್ಯಾನಿಸಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Exit mobile version