ಚನ್ನಪಟ್ಟಣ: ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಶಾಸಕರ ಕೆಲಸ, ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಆ ಕೆಲಸ ಮಾಡಲಿಲ್ಲ. ಅವರು ಕ್ಷೇತ್ರದ ಜನರೊಂದಿಗೆ ಸಂಬಂಧ ಬೆಸೆಯಲು ಮುಂದಾಗಲೇ ಇಲ್ಲ ಎಂದರು.
ಕುಮಾರಸ್ವಾಮಿಯವರ ಆಡಳಿತ ವೈಖರಿ ನೋಡಿ ಬೇಸತ್ತಿರುವ ಜನ ಈ ಬಾರಿ ನನಗೆ ಆಶೀರ್ವದಿಸುವ ಭರವಸೆ ಇದೆ. ಸ್ವಾಭಿಮಾನ ಸಂಕಲ್ಪ ಯಾತ್ರೆಗೆ ದೊರಕುತ್ತಿರುವ ಅಭೂತಪೂರ್ವ ಬೆಂಬಲ ನನ್ನ ವಿಶ್ವಾಸ ಇಮ್ಮಡಿಗೊಳಿಸಿದೆ ಎಂದರು.
ಕೆಲ ದಿನಗಳ ಹಿಂದೆ ನಗರದ ಅಭಿವೃದ್ಧಿಗೆ 20 ಕೋಟಿ ಅನುದಾನ ತಂದಿದ್ದೇನೆ. ಇದೀಗ ಚುನಾವಣೆ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿರುವ ಕುಮಾರಸ್ವಾಮಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಅವರಿಗೆ ಕ್ಷೇತ್ರ ಅಭಿವೃದ್ಧಿ ನೆನಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.