ಹಾವೇರಿ : ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಕೋಲಾರಕ್ಕಿಂತ ಪಾಕಿಸ್ತಾನ ಸೇಫ್ ಜಾಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯ ವಾಡಿದರು.
ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಮಾತನಾಡಿ, ಸಿದ್ದರಾಮಯ್ಯಗೆ ಪಾಕಿಸ್ತಾನದಲ್ಲಿ ಯಾರ ಕಾಟವೂ ಇರಲ್ಲ. ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯವರು ಇಲ್ಲ. ಯಡಿಯೂರಪ್ಪನವರೂ ಇಲ್ಲ. ಬೊಮ್ಮಾಯಿಯವರೂ ಕೂಡಾ ಇಲ್ಲ. ಪಾಕಿಸ್ತಾನದಲ್ಲಿ ಕಾಟ ಕೊಡಲು ಡಿಕೆ ಶಿವಕುಮಾರ್ ಕೂಡಾ ಇರಲ್ಲ. ಖರ್ಗೆ ಕೂಡಾ ಇರಲ್ಲ. ಅವರ ಮನಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ತಾನ ಮಾತ್ರ ಎಂದರು.
ಪ್ರಜಾಧ್ವನಿ ಎಂದರೆ ಜನ ಮಾತನಾಡೋದು.ನಾವೂ ಚಿಕ್ಕಮಗಳೂರು ಉತ್ಸವ ಮಾಡಿದೆವು, ಯಾರಿಗೂ ಗಾಡಿ ವ್ಯವಸ್ಥೆ ಮಾಡಲಿಲ್ಲ. ಸ್ವಯಂ ಪ್ರೇರಿತರಾಗಿ ಜನ ಉತ್ಸವಕ್ಕೆ ಬಂದಿದ್ದರು.ಇದು ಜನರ ತಾಕತ್ತು, ರಾತ್ರಿವರೆಗೂ ಜನ ಕಾರ್ಯಕ್ರಮ ನೋಡಿದರು ಎಂದರು.
ಕಾಂಗ್ರೆಸ್ ಮುಳುಗ್ತಿರೋ ಹಡಗು. ಗುಜರಾತ್ ನಲ್ಲಿ 77 ಸ್ಥಾನಗಳಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ. ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ. ಕಾಂಗ್ರೆಸ್ ನಲ್ಲಿ ಮುಂದಿನ ದಿನಗಳಲ್ಲಿ ಮಹಾಭಾರತ ಶುರುವಾಗುತ್ತೆ ನೋಡ್ತಾ ಇರಿ ಎಂದು ವಾಗ್ದಾಳಿ ನಡೆಸಿದರು. ಮೋದಿಯವರ ಆಡಳಿತ ನೋಡಿ ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲುತ್ತೆ ಅನ್ನೋದು ಗೊತ್ತಿದೆ. ಮುಳುಗೋ ಹಡಗಲ್ಲಿ ಯಾರು ಇರ್ತಾರೆ? ಎಂದರು.