ಬೆಂಗಳೂರು: ಡಿ.ಕೆ. ಶಿವಕುಮಾರ್ ನನ್ನ ಮನೆದೇವರು ಇದ್ದ ಹಾಗೆ.. ಅವರು ಹೇಳಿದ ಹಾಗೆ ಕೇಳುತ್ತೇನೆ ಎಂದು ಕೆ.ಜಿ.ಎಫ್ ಬಾಬು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನನಗೆ ಟಿಕೆಟ್ ಕೊಟ್ಟರೂ, ಕೊಡದಿದ್ದರೂ 350 ಕೋಟಿ ರೂ. ಖರ್ಚು ಮಾಡಲು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ನಾನು ಕಳೆದ ಬಾರಿ ಸುದ್ದಿಗೋಷ್ಠಿ ಮಾಡಿದಾಗ ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕಾಗಿ ಎಲ್ಲರ ಕ್ಷಮೆ ಕೇಳುತ್ತೇನೆ. ಆದರೆ, ನನ್ನ ತಾತನ ಕಾಲದಿಂದಲೂ ಕಾಂಗ್ರೆಸ್ ಜೊತೆಗಿರುವ ನಮ್ಮನ್ನು ಪಕ್ಷದಿಂದ ತಳ್ಳಿದರೂ ಹೊರಗೆ ಹೋಗುವುದಿಲ್ಲ ಎಂದರು.
ರಾಜ್ಯದಲ್ಲಿ ಜಾತಿ ಮತ್ತು ವ್ಯಕ್ತಿಗಳನ್ನು ನೋಡಿ ಟಿಕೆಟ್ ಕೊಟ್ಟರೆ ಕೇವಲ 80 ಸೀಟು ಗೆಲ್ಲುತ್ತದೆ. ಕೆಲವು ಮ್ಯಾನೇಜ್ಮೆಂಟ್ ವ್ಯಕ್ತಿಗಳನ್ನು ಬದಲಾವಣೆ ಮಾಡಿ ಎಂದು ಹೇಳಿದ್ದೆನು. ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ. ನಾನು ಅಂತಾ ದೊಡ್ಡ ಲೀಡರ್ ಅಲ್ಲ, ಸಲೀಂ ಅಹಮದ್ ಅವರಿಗೆ ಏನಾದ್ರೂ ನನ್ನಿಂದ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.
ಜಾತಿ ನೋಡಿ ವ್ಯಕ್ತಿ ನೋಡಿ ಟಿಕೆಟ್ ಕೊಡಬೇಡಿ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅನ್ನೋದು ನಮ್ಮ ಆಸೆಯಾಗಿದೆ ಜಾತಿ ನೋಡಿ, ವ್ಯಕ್ತಿ ನೋಡಿ ಟಿಕೆಟ್ ಕೊಟ್ಟರೆ ಕಡಿಮೆ ಸ್ಥಾನ ಬರುತ್ತೆ ಅಂತಾ ನೋವಿನಿಂದ ಹೇಳಿದ್ದೇನೆ ಅಂತಾ ಈ ವೇಳೆ ಹೇಳಿದರು. ನಾನು, ನಮ್ಮ ತಾತ ಹಾಗೂ ಮುತ್ತಾತನ ಕಾಲದಿಂದಲೂ ನಾವು ಕಾಂಗ್ರೆಸ್ ಜೊತೆಗೆ ಇದ್ದೀವಿ. ಹೀಗಾಗಿ, ಅವರು ತಳ್ಳಿದ್ರೂ ನಾನು ಕಾಂಗ್ರೆಸ್ಬಿಟ್ಟು ಹೋಗಲ್ಲ ಎಂದು ಹೇಳಿದರು.