ಬೆಂಗಳೂರು: ಈವರೆಗೆ ಜೆಡಿಎಸ್ನಲ್ಲಿದ್ದ ಆರ್.ಮಂಜುನಾಥ್ ನನ್ನ ಸ್ನೇಹಿತ, ವಿಧಾನಸಭೆಯಲ್ಲಿ ಇರ್ತಿದ್ದ. ನಾನು ಗಿಣಿಗೆ ಹೇಳಿದ ಹಾಗೆ ಹೇಳಿದೆ. ಅವತ್ತು ನನ್ನ ಮಾತು ಕೇಳಲಿಲ್ಲ. ಮಂಜುನಾಥ್ ನನ್ನ ಮಾತು ಕೇಳಿದ್ರೆ 137ನೇ ಶಾಸಕನಾಗಿ ಇರುತ್ತಿದ್ದ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಂಜುನಾಥ್ ಇಂದು ತೀರ್ಮಾನ ಮಾಡಿ ಕಾಂಗ್ರೆಸ್ಗೆ ಬಂದಿದ್ದಾರೆ. ಕಾಂಗ್ರೆಸ್ನಲ್ಲಿ 136 ಶಾಸಕರಿದ್ದಾರೆ. ಕಾಂಗ್ರೆಸ್ ಸೇರುವವರ ದೊಡ್ಡ ಪಟ್ಟಿ ನಮ್ಮ ಹತ್ತಿರ ಈಗ ಇದೆ. ಅದನ್ನು ಈಗ ಚರ್ಚೆ ಮಾಡಲು ಹೋಗಲ್ಲ ಎಂದರು.
ನಮ್ಮ ಜೊತೆ 40 ಶಾಸಕರು ಇದ್ದಾರೆ ಅಂತ ಕುಮಾರಸ್ವಾಮಿ ಹೇಳ್ತಾರೆ. ಅಲ್ಲದೆ ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ 19 ಶಾಸಕರನ್ನು ಕಳಿಸುತ್ತಾರಂತೆ. ಇದನ್ನು ನಾವು ನಂಬಬೇಕಾ? ಮೊದಲು ಎನ್ಡಿಎ ಇಂದ ಹೊರಗೆ ಬರಲಿ ಎಂದು ಸವಾಲು ಹಾಕಿದರು.
ನಿಮ್ಮೆಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಪಕ್ಷಕ್ಕೆ ಬಂದಿದ್ದಾರೆ. ಇವತ್ತು ಅವರು ಹೊಸಬರು ಅಂತಾ ಏನಿಲ್ಲ, ನನಗೆ, ಬಿ.ಎಲ್ ಶಂಕರ್ಗೆ ಏನು ಸೀನಿಯರಿಟಿ ಇದೆಯೋ, ಅಷ್ಷೇ ಸೀನಿಯರಿಟಿ ಇವರಿಗೂ ಇದೆ ಎಂದರು.
ಇದನ್ನೂ ಓದಿ: ಸಿಪಿಐಎಂ ಹಿರಿಯ ನಾಯಕ ಶಂಕರಯ್ಯ ನಿಧನ
ಕಷ್ಟ ಕಾಲದಲ್ಲಿ ನಮ್ಮ ಜೊತೆ ನಿಂತ ಕಾರ್ಯಕರ್ತರು ಇದ್ದಾರೆ. ಧ್ರುವ ನಾರಾಯಣ ಗೆದ್ದಿದ್ದರು, ಬೆಂಗಳೂರಿನಲ್ಲಿ ಸೌಮ್ಯಾ ರೆಡ್ಡಿ ಸೋತರು. ನಾವು ಅಧಿಕಾರ ಮಾಡ್ತಾ ಇರೋದು ಅವರು ಸಹಿಸಿಕೊಳ್ಳಲು ಆಗುತ್ತಿಲ್ಲ. ನಾವು ಅಧಿಕಾರ ಮಾಡ್ತಾ ಇರೋದು ನಿಮ್ಮ ಕೈಯಲ್ಲಿ ತಡೆಯಲು ಆಗ್ತಾ ಇಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅದೆಲ್ಲ ಏನೇ ಇರಲಿ, ಏನು ಬೇಕಾದ್ರು ಸಿಗಬಹುದು. ಆದರೆ ಕಾಂಗ್ರೆಸ್ನ ಬಾವುಟ ನಿಮ್ಮ ಮೇಲೆ ಹಾಕಿಕೊಳ್ಳುವ ಭಾಗ್ಯ ಸಿಕ್ಕಿದೆ ಅಲ್ಲವಾ? ಮುಂದಕ್ಕೆ ಏನೇ ತಿಪ್ಪರಲಾಗ ಹಾಕಿದ್ರೂ ತಲೆಕೆಡಿಸಿಕೊಳ್ಳಬೇಡಿ. ಒಗ್ಗಟಾಗಿ ಮುಂದೆ ಹೋಗೋಣ, ಮುಂದೆ ಬರೋರು ತುಂಬಾ ಇದ್ದಾರೆ. ನೀವು ಮನೆ ಮನೆಗೆ ಹೋಗಿ ಕಾಂಗ್ರೆಸ್ ಪರ ಅಲೆ ಎಬ್ಬಿಸಬೇಕು. ಇದು ಭಾರತ್ ಜೋಡೋ ಭವನ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಭವನ, ಎಲ್ಲರಿಗೂ ಶುಭವಾಗಲಿ ಅಂತಾ ಕೋರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಜೆಡಿಎಸ್ನ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಪಾಪ ಇವತ್ತು ರಾಜ್ಯಾಧ್ಯಕ್ಷರನ್ನು ಸ್ಥಾನದಲ್ಲಿ ಕೂರಿಸಿದೆ. ಪಾಪ ಅವರಿಗೆ ಏನು ಬೇಕೋ ಅದು ಮಾಡಲಿ. ಸಂವಿಧಾನಬದ್ದವಾಗಿ ಪ್ರತಿಪಕ್ಷಕ್ಕೆ ಏನಿದೆಯೋ ಅದು ಮಾಡಲಿ. ಇವತ್ತು ನೋಡಿ ಪಾಪ ಅವರು ನಮ್ಮ ದಿನಾಂಕವನ್ನೇ ಬಳಸಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಮಾಡೋಕೆ ನಾವು ಆರಿಸಿದ ದಿನಾಂಕವನ್ನೇ ಅವರು ಆಯ್ಕೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.