ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಂಕಿತ ಉಗ್ರನ ಪರ ಮಾತನಾಡಿದ್ದಾರೆ. ಕೂಡಲೇ ಅವರನ್ನು ಕಾಂಗ್ರೆಸ್ನಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು.
ನಗರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿ, ಡಿಕೆಶಿ, ಸಿದ್ದರಾಮಯ್ಯ ಮೈಯಲ್ಲಿ ಭುಟ್ಟೋ, ಜಿನ್ನಾ ರಕ್ತ ಹರಿಯುತ್ತಿದೆ. ಡಿಕೆಶಿ ಅವರ ಹೇಳಿಕೆಯನ್ನು ಕಾಂಗ್ರೆಸ್ನವರು ಖಂಡಿಸುವ ಕೆಲಸ ಮಾಡಿಲ್ಲ. ಖರ್ಗೆ ಅವರೇ ಮೊದಲು ಡಿಕೆಶಿ, ನಲಪಾಡ್ನನ್ನ ಪಕ್ಷದಿಂದ ಆಚೆ ಹಾಕಿ ಎಂದು ಕಿಡಿಕಾರಿದರು.
ಕುಕ್ಕರ್ ಬ್ಲಾಸ್ಟ್ ಮಾಡಿದವನು ಭಯೋತ್ಪಾದಕ ಅಲ್ಲ ಅಂತಾರೆ. ಅಧಿಕಾರ ನಡೆಸಿದ ಡಿ.ಕೆ. ಶಿವಕುಮಾರ್ಗೆ ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲ. ಪಿಎಫ್ಐ ಬ್ಯಾನ್ ಮಾಡಿದಾಗಲೂ ಡಿ.ಕೆ.ಶಿವಕುಮಾರ್ ಹೀಗೆ ಹೇಳಿದ್ದರು. ದೇಶ ದ್ರೋಹದ ಕಾರಣಕ್ಕೆ ಪಿಎಫ್ಐ ಸಂಘಟನೆ ಬ್ಯಾನ್ ಮಾಡಲಾಗಿದೆ. PFI ರೀತಿಯಲ್ಲೇ ಕಾಂಗ್ರೆಸ್ ಬ್ಯಾನ್ ಮಾಡುವ ಸ್ಥಿತಿ ಬೇಗ ಬರುತ್ತೆ ಎಂದರು. ಪಾಕಿಸ್ತಾನದ ಭಯೋತ್ಪಾದನೆಯನ್ನು ಅಂದೇ ಕಾಂಗ್ರೆಸ್ ಟೀಕಿಸುವ ಕೆಲಸ ಮಾಡಬೇಕಿತ್ತು. ಆದರೆ ಭಯೋತ್ಪಾದನೆಗೆ ಅಂದಿನಿಂದ ಬೆಂಬಲ ಕೊಡುತ್ತಾ ಬಂತು ಎಂದು ಹೇಳಿದರು.
ಪಾಕ್ನ ನಾಯಿ ಬೊಗಳಿದರೆ ಏನೂ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ನಾಯಕ ಅಂತಾ ಇಡೀ ವಿಶ್ವವೇ ಒಪ್ಪಿದೆ. ಪಾಕ್ ಸಚಿವ ಬಿಲಾವಲ್ ಭುಟ್ಟೋ ಮೋದಿಗೆ ಕ್ಷಮೆ ಕೇಳಬೇಕು. ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನವನ್ನು ಅಳಸಿ ಹಾಕುತ್ತೇವೆ. ಈ ಮೂಲಕ ಅಖಂಡ ಭಾರತ ನಿರ್ಮಾಣ ಆಗುತ್ತದೆ ಎಂದರು.