ಬೆಂಗಳೂರು: ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟವರು ಅಜ್ಜಯ್ಯನವ್ರು. ನಾನು 134 ಸೀಟು ಕೇಳ್ಕೊಂಡಿದ್ದೆ. ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡ್ಬಾರ್ದು ಅಂತಾ ಬೇಡ್ಕೊಂಡಿದ್ದೆಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಅಜ್ಜಯ್ಯನ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಅಧಿಕಾರ ಹಿಡಿದಾಗಲೇ, ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡ್ಬೇಕು ಅನ್ನೋ ಮಾರ್ಗದರ್ಶನ ಬಂದಿತ್ತು. ಹೀಗಾಗಿಯೇ ನಾವು ಗೃಹಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡೋ ಯೋಜನೆ ಮಾಡಿದೆವು ಎಂದು ತಿಳಿಸಿದರು.
ನಾನು ಸೋತು ಸಿದ್ದರಾಮಯ್ಯರಿಗೆ ಸಹಕಾರ ಕೊಟ್ಟಿದ್ದೇನೆ. ಅವರೂ ಸಹಕಾರ ಕೊಡುವ ವಿಶ್ವಾಸ ಇದೆ , ಕೆಲವರು ನನಗೆ ಸಿದ್ದರಾಮಯ್ಯರ ನಡುವೆ ವ್ಯತ್ಯಾಸ ಇದೆ ಅಂತಿದ್ರು, ಆದರೆ ನಾವಿಬ್ಬರೂ ಚೆನ್ನಾಗಿದ್ದೇವೆ ಎಂದರು.
ಈ ಮಠ ನನಗೆ ಪುಣ್ಯ ದೈವ ಕ್ಷೇತ್ರ. ನನಗೆ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಗಂಗಾಧರ ಅಜ್ಜ, ಇಲ್ಲಿಯ ಸ್ವಾಮೀಜಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ, ಯಾರಿಗೆ ಟಿಕೆಟ್ ಕೊಡ್ಬೇಕು, ಯಾರಿಗೆ ಕೊಡ್ಬಾರ್ದು ಅನ್ನೋದನ್ನ ಇಲ್ಲೇ ಮಾರ್ಗದರ್ಶನ ಪಡೆದು ನಿರ್ಧಾರ ಮಾಡಿದ್ದೇನೆ. ರಾಜ್ಯದ ಚುನಾವಣಾ ಫಲಿತಾಂಶ ಬಂದಮೇಲೆ ಮೊದಲು ಇಲ್ಲಿಗೆ ಬಂದಿದ್ದೇನೆ. ಗುರಿ ತಲುಪಬೇಕಾದ್ರೆ ಗುರು ಮಾರ್ಗದರ್ಶನ ಬೇಕಾಗುತ್ತೆ ಎಂದು ಅಭಿಪ್ರಾಯಪಟ್ಟರು.