ಬೆಂಗಳೂರು : ಮಾಜಿ ಸಚಿವ ವಿ ಸೋಮಣ್ಣ ಪರಾಜಿತರಾಗಿರಬಹುದು. ಆದರೆ ಮುಂದೆ ಅವರಿಗೆ ಒಳ್ಳೆಯ ಅವಕಾಶ ಸಿಗಲಿದೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಜಯನಗರದಲ್ಲಿರುವ ಸೋಮಣ್ಣ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಸೋಮಣ್ಣ ನಮ್ಮ ಹಿರಿಯ ನಾಯಕರು. ಪಕ್ಷದ ಇಚ್ಛೆಯಂತೆ ಚಾಮರಾಜನಗರ ಮತ್ತು ವರುಣಾದಲ್ಲಿ ಸ್ಫರ್ಧಿಸಿ ಪರಾಭವಗೊಂಡಿದ್ದಾರೆ. ಮುಂದೆ ಒಳ್ಳೆಯ ಅವಕಾಶ ಅವರಿಗೆ ಸಿಗುತ್ತದೆ. ವರಿಷ್ಠರು ಕೂಡಾ ಸೋಮಣ್ಣ ಅವರ ಜೊತೆ ಮಾತಾಡಿದ್ದಾರೆ ಎಂದು ತಿಳಿಸಿದರು.
ಶಾಸಕಾಂಗ ಪಕ್ಷದ ಸಭೆ ಕರೆಯಲು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ಬಹುತೇಕ ನಾಳೆ ಅಥವಾ ನಾಡಿದ್ದು ಸಭೆ ಕರೆಯಬಹುದು. ಆದರೆ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು. ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿ, ಪರಿಸ್ಥಿತಿಯನ್ನು ಬೊಮ್ಮಾಯಿಯವರು ಅವಲೋಕನ ಮಾಡಿ ಬಂದಿದ್ದಾರೆ. ನಮಗೆ ಅದು ದೊಡ್ಡದೇನಲ್ಲ, ಸ್ನೇಹಿತನಾಗಿ ಬಂದಿದ್ದಾರೆ.
ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ. ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿದ್ದೇನೆ. ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ. ಒಂದೊಂದು ಸಲ ಒಳ ಏಟುಗಳು ಆದಾಗ ಇದೆಲ್ಲಾ ನಡೆಯುತ್ತದೆ. ಕಾಲವೇ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದರು.
ಕಡೆ ಕ್ಷಣದವರೆಗೂ ಹೋರಾಟ ನಡೆಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಒಳ್ಳೆಯ ದಿನಗಳು ಬರಲಿವೆ. ನಾವೆಲ್ಲಾ ನಿಮ್ಮ ಜೊತೆ ಇದ್ದೇವೆ ಎಂದು ಅಭಯ ನೀಡಿದರು.