ಬೆಂಗಳೂರು : ಪ್ರಣಾಳಿಕೆ ಘೋಷಣೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಜಿ ಪರಮೇಶ್ವರ್ ಅಸಾಮಾಧಾನಗೊಂಡಿದ್ದಾರೆ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಷ್ಟೇ ಏಕೆ, ಡಿಸಿಎಂ, ಪ್ರಬಲ ಖಾತೆಗಳನ್ನೂ ನಿಭಾಯಿಸಿದ್ದೇನೆ.
ಪಕ್ಷ ಸಂಘಟನೆಯಲ್ಲಿ ನನ್ನದೆ ಆದ ಕೊಡುಗೆ ಇದೆ. ಪ್ರಸ್ತುತ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಹ ಆಗಿದ್ದೇನೆ. ಆದರೂ ತನ್ನನ್ನ ಕಡೆಗಣಿಸಿ ಯೋಜನೆಗಳ ಘೋಷಣೆ ಮಾಡುತ್ತಿದ್ದಾರೆಂದು ಬೇಸರಿಸಿದರು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಣಾಳಿಕೆ ಕಮಿಟಿಯಲ್ಲಿ ಚರ್ಚಿಸದೇ, ಭರವಸೆ ವೇದಿಕೆಯಲ್ಲಿ ಘೋಷಣೆ ಮಾಡುತ್ತಿದ್ದಾರೆ.
ನಾಮಕವಾಸ್ತೆ ಪ್ರಣಾಳಿಕೆ ಸಮಿತಿಯಲ್ಲಿ ಇರುವುದಿಲ್ಲ ಎಂದು ರಾಜೀನಾಮೆ ಪತ್ರ ಬರೆದು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಹಲವು ಬಾರಿ ಅಸಮಾಧಾನ ತೋಡಿಕೊಂಡರೂ ರಾಜ್ಯ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲ್ಲ. ಹೀಗಾಗಿ ಜಿ ಪರಮೇಶ್ವರ್ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದು ಕಾಂಗ್ರೆಸ್ ಕಂಗೆಡಿಸಿದೆ.ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಸುರ್ಜೇವಾಲ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆಯಲ್ಲಿ ಎಲ್ಲವೂ ಸರಿಪಡಿಸುವ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.