ಉಡುಪಿ: ಭಾರತದ ನಾಲ್ಕೈದು ಮಂದಿಯಲ್ಲಿ ಈಗಾಗಲೇ ರೂಪಾಂತರ ವೈರಸ್ ಪತ್ತೆಯಾಗಿದೆ. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಹೇಳಿದೆ. ದೇಶದಲ್ಲಿ ಆತಂಕ ಪಡುವ ವಿಚಾರ ಇಲ್ಲ ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ,ಚೀನಾದಲ್ಲಿ ಪ್ರತಿದಿನ ಐದರಿಂದ ಹತ್ತು ಸಾವಿರ ಜನ ಸಾಯುತ್ತಿದ್ದಾರೆ. ವೈದ್ಯಕೀಯ ನೆರವು, ಆಹಾರ, ಔಷಧಿ ಸಿಗುತ್ತಿಲ್ಲ. ಭಾರತಕ್ಕೂ ಚೀನಾದಿಂದ ಪ್ರವಾಸಿಗರು ಬರುತ್ತಿದ್ದಾರೆ ಎಂದರು. ಜಾಗೃತರಾಗಿರಬೇಕು, ಮಾಸ್ಕ್ ಧರಿಸಬೇಕು, ನಮ್ಮ ವ್ಯಾಕ್ಸಿನ್ ದೇಶವನ್ನು ರಕ್ಷಿಸಿದೆ. ಎಲ್ಲ ಭಾರತೀಯರಿಗೂ ಉಚಿತ ಲಸಿಕೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಈಗ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು.
ಮಾಸ್ಕ್ ಮತ್ತು ಲಸಿಕೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಇರುವ ಪರಿಹಾರ ಮಾರ್ಗ. ಮಕ್ಕಳ ಬಗೆಗೂ ಎಚ್ಚರ ವಹಿಸಬೇಕು ಎಂದರು.ಭಾರತ್ ಜೋಡೋ ಯಾತ್ರೆ ತಡೆಗಟ್ಟುವ ಕೆಲಸ ಯಾರೂ ಮಾಡಿಲ್ಲ. ನಾಗರಿಕರಿಗೆ ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟ ಗೊತ್ತಿದೆ. ದೇಶದ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಜಾಗ್ರತೆ ವಹಿಸಬೇಕು. ಕಾಂಗ್ರೆಸ್ ಪಕ್ಷದ ನಾಯಕರಿಗೆ ನಾವ್ಯಾರೂ ಬುದ್ಧಿ ಹೇಳುವಂತಿಲ್ಲ ಎಂದು ನುಡಿದರು.