ಬಾಗಲಕೋಟೆ: ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಟಿಕೆಟ್ ನೀಡ್ತಾರೆ ಎಂಬ ಜಗದೀಶ ಶೆಟ್ಟರ್ ಕುಟುಂಬಸ್ಥರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಚುನಾವಣೆ ಮುಂಚೆ, ಬಿಜೆಪಿ ಬಿಡೋ ಮುಂಚೆ ಇದನ್ನೆಲ್ಲಾ ಯಾಕೆ ಹೇಳಲಿಲ್ಲ, ಇವರು ಮುಖ್ಯಮಂತ್ರಿ ಆಗಲು ಯಾರಿಗೆ ಬಕೆಟ್ ಹಿಡಿದಿದ್ರು’ ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವರ ತಮ್ಮ ಎಂಎಲ್ಸಿ ಆಗಿದ್ದಾರಲ್ಲ, ಈಗ ಸಂತೋಷ್ ಬಗ್ಗೆ ಹುಚ್ಚುಚ್ಚರಾಗಿ ಮಾತನಾಡ್ತಿದ್ದಾರೆ. ಪ್ರದೀಪ್ ಎಂಎಲ್ಸಿ ಆಗಲು ಯಾರ ಬಕೆಟ್ ಹಿಡಿದಿದ್ದರು? ಯಾರು ಪಕ್ಷದ ಸಿದ್ಧಾಂತವನ್ನ ಒಪ್ಪಿ ತಾಯಿ ಅಂತ ತಿಳಿಯುತ್ತಾರೋ, ಆಗ ಜನ ಅವರನ್ನು ಮೆಚ್ಚುತ್ತಾರೆ. ಅವರದ್ದೇ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಯಾಕೆ ಸೋತರು? ಹೆತ್ತ ತಾಯಿಗೆ (ಪಕ್ಷಕ್ಕೆ) ಇವ್ರು ಬಯ್ದುಕೊಂಡು ಹೋದರೆ ಉದ್ದಾರ ಆಗ್ತಾನಾ’ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.
ಇದನ್ನೂ ಓದಿ; ನಿನ್ನ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ; ಪರಮೇಶ್ವರ್ ವಿರುದ್ಧ ಏಕವಚನದಲ್ಲೇ ಈಶ್ವರಪ್ಪ ವಾಗ್ದಾಳಿ!
‘ಸನಾತನ ಧರ್ಮದ ಪ್ರಕಾರ ಕೆಟ್ಟ ತಾಯಿ ಇಲ್ಲ, ಕೆಟ್ಟ ಮಗ ಇರಬಹುದು. ಅಂತಹ ಕೆಟ್ಟ ಮಕ್ಕಳಲ್ಲಿ ಜಗದೀಶ ಶೆಟ್ಟರ್, ಪ್ರದೀಪನಂತವರು ಇದ್ದಾರೆ. ಅವರು ಇವತ್ತಿನವರೆಗೂ ಬಿಜೆಪಿ ಸಿದ್ಧಾಂತ ಟೀಕೆ ಮಾಡುತ್ತಿಲ್ಲ. ಸಂತೋಷ ಬಗ್ಗೆ ಟೀಕೆ ಮಾಡ್ತಾರೆ. ಇವರು ಅಧಿಕಾರ ಅನುಭವಿಸಿದಾಗ ಸಂತೋಷ್ ಪ್ರಧಾನ ಕಾರ್ಯದರ್ಶಿ ಆಗಿರಲಿಲ್ವಾ’ ಎಂದು ಪ್ರಶ್ನಿಸಿದ್ದಾರೆ.
‘ಇವ್ರು ಸಿಎಂ ಆಗಬೇಕಾದ್ರೆ ಸಂತೋಷ್ ಒಳ್ಳೆಯವರು. ಈಗ ಅವರು ಬಕೆಟ್ ಹಿಡಿಕೊಂಡು ಹೋದ್ರು, ಇವರು ಬಕೆಟ್ ಹಿಡಕೊಂಡು ಹೋದ್ರು ಅಂತಾರೆ. ಹಾಗಾದ್ರೆ, ನೀವು ಯಾರ ಬಕೆಟ್ ಹಿಡಕೊಂಡು ಹೋಗಿ ಕಾಂಗ್ರೆಸ್ ಸೇರಿದ್ರಿ? ನೀವು ಚೆನ್ನಾಗಿರಿ, ಕಾಂಗ್ರೆಸ್ ಹೋಗ್ತೀರೋ, ಮುಸ್ಲಿಂ ಲೀಗ್ ಹೋಗ್ತೀರೋ ಹೋಗಿ. ಆದರೆ, ಹೋದಮೇಲೆ ತಾಯಿಯನ್ನು ಮಾತ್ರ ಒದೆಯಬೇಡಿ. ಸಂತೋಷ್ ನಮ್ಮಂತಹ ಸಾವಿರಾರು ಜನರನ್ನ ಬೆಳೆಸಿದ್ದಾರೆ. ಅವರು ರಾಜಕಾರಣಿ ಆಗಿದ್ದಾರೆ, ಆರ್.ಎಸ್.ಎಸ್. ಪ್ರಚಾರಕರೂ ಹೌದು’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.