ಬೀದರ : ಮಾಜಿ ಸಚಿವ ಅಶ್ವಥ್ ನಾರಾಯಣ ಅವರಿಗೆ ತಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು. ಅವರು ಕೇಂದ್ರದ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನ ಮಾಡಿದ್ದರು. ರಾಜ್ಯದ ಶಿಕ್ಷಣವನ್ನು ಕೇಂದ್ರ ನಿಯಂತ್ರಿಸುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಶಿಕ್ಷಣ ನೀತಿ ರಾಜ್ಯಕ್ಕೆ ಸೀಮಿತವಾಗಿದ್ದು, ಅದನ್ನು ನಾವೇ ನಿಯಂತ್ರಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ‘ಇದು ಸರ್ವಪಕ್ಷಗಳ ಸಭೆಯಲ್ಲ, ರಾಜ್ಯವನ್ನು ಲೂಟಿ ಹೊಡೆದಿರುವ ಪಕ್ಷಗಳ ಸಭೆ’
ಎನ್ಇಪಿ ಜಾರಿಗೆ ಬಂದಾಗಿನಿಂದ ರಾಜ್ಯ ಹಾಗೂ ದೇಶದಲ್ಲಿ ಏನೂ ದೊಡ್ಡ ಬದಲಾವಣೆಯಾಗಿಲ್ಲ, ಅದು ಹೋದಮೇಲೆ ಯಾವ ದೊಡ್ಡ ಅನಾಹುತನೂ ಆಗಲ್ಲ. ಈ ರೀತಿ ಭಯದ ವಾತಾವರಣ ಸೃಷ್ಟಿ ಮಾಡುವುದು ಒಳ್ಳೆಯದಲ್ಲ ಎಂದು ಬಿಜೆಪಿಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಶಿಕ್ಷಣ ನೀತಿ ಘೋಷಣೆಯಾದ ಬಳಿಕ ಅವರು ಚರ್ಚೆ ಮಾಡಲಿ, ಎನ್ಇಪಿ ಬಗ್ಗೆ ದಕ್ಷಿಣ ಬಾರತದ ಅನೇಕ ರಾಜ್ಯಗಳಲ್ಲಿ ವಿರೋಧವಿದೆ. ನಮ್ಮ ಮಕ್ಕಳ ಶಿಕ್ಷಣವನ್ನು ದೆಹಲಿಯಲ್ಲಿ ಯಾಕೆ ತೀರ್ಮಾನ ಮಾಡಬೇಕು ಎಂದು ಪ್ರಶ್ನಿಸಿದರು.
ಎಲ್ಲ ವಿಜ್ಞಾನಿಗಳಿಗೂ ನಾನು ತಲೆಬಾಗುತ್ತೇನೆ..
ಚಂದ್ರಯಾನ-3ರ ಯಶಸ್ಸಿಗೆ ಶುಭಕೋರಿರುವ ದಿನೇಶ್ ಗುಂಡೂರಾವ್, ನಮ್ಮ ದೇಶದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಸಾಧನೆಯು ಹೆಮ್ಮೆಯ ಸಂಕೇತವಾಗಿದೆ. ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಅವರ ಕಾಲದಿಂದಲೂ ಎಲ್ಲ ಸರ್ಕಾರಗಳು ಸ್ಪೇಸ್ ರಿಸರ್ಚ್ನ್ನು ಪೋಷಿಸಿ, ಬೆಳೆಸಿದ್ದು ಸಂತಸದ ಸಂಗತಿಯಾಗಿದೆ ಎಂದರು.
ಚಂದ್ರಯಾನವು ಯಶಸ್ವಿಯಾಗಿ ಲ್ಯಾಂಡ್ ಆಗಿ ಇನ್ನಷ್ಟು ದೇಶದ ಗರಿಮೆಯನ್ನು ಹೆಚ್ಚಿಸಲಿ, ಇದರಲ್ಲಿ ಕಾರ್ಯನಿರ್ವಹಿಸಿರುವ ಎಲ್ಲ ವಿಜ್ಞಾನಿಗಳಿಗೆ ಧನ್ಯವಾದಗಳನ್ನು ತಿಳಿಸಿರುವ ಆರೋಗ್ಯ ಸಚಿವರು ಎಲ್ಲ ವಿಜ್ಞಾನಿಗಳಿಗೂ ನಾನು ತಲೆಬಾಗುತ್ತೇನೆ ಎಂದು ವಿಜ್ಞಾನಿಗಳ ಶ್ರಮವನ್ನು ಶ್ಲಾಘಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.