ರಾಮನಗರ: ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ರಾಮನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಾಧ್ಯದವರೊಂದಿಗೆ ಮಾತನಾಡಿ, ನನ್ನನ್ನು ಸೋಲಿಸಲು ರಾಷ್ಟ್ರೀಯ ಪಕ್ಷಗಳು ಒಳಪ್ಪಂದ ಮಾಡಿಕೊಂಡಿವೆ. ನಮ್ಮನ್ನು ಬಿ ಟೀಂ ಅಂತಾರೆ, ಸಿದ್ದರಾಮಯ್ಯನವ್ರು ಬೇರೆ ಪಕ್ಷ ಕಟ್ಟಿ 2 ಸೀಟು ತರಲಿ ನೋಡೋಣ, ಜೆಡಿಎಸ್ ಬೆಳೆಸದಿದ್ರೆ ನಿಮ್ಮನ್ನು ಕೈ ಪಕ್ಷದವರು ಎಲ್ಲಿ ಕರೆಯುತ್ತಿದ್ರು ಎಂದು ಪ್ರಶ್ನಿಸಿದ್ದಾರೆ.
ಶಿಕಾರಿಪುರದಲ್ಲಿ ಕಾಂಗ್ರೆಸ್ ನಾಯಕರು ಏನು ಮಾಡಿದ್ದಾರೆ? ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ಅವರನ್ನು ಗೆಲ್ಲಿಸಲು ಕಾಂಗ್ರೆಸ್ಸಿಗರು ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಾರೆ. ಇದಕ್ಕೆಲ್ಲ ಜನ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್, ಬಿಜೆಪಿಗೆ ಅಧಿಕಾರಕ್ಕೆ ಬರುವ ಸ್ಪಷ್ಟ ಭರವಸೆ ಇಲ್ಲ, ಎರಡೂ ಪಕ್ಷಗಳಿಗೆ ಆತಂಕ ಶುರುವಾಗಿದೆ, ನಾವು ಈ ಬಾರಿ 123 ಗುರಿಯಿಟ್ಟು ಹೊರಟಿದ್ದೇವೆ, ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ಭೇಟಿ ನೀಡಿದ್ದೇವೆ ಎಂದರು.