ಬೆಂಗಳೂರು : ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಏಳು ಕೋಟಿ ರೂಪಾಯಿ ವಂಚಿಸಿರುವ ಆರೋಪದ ಮೇಲೆ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ನಾಲ್ವರನ್ನು ಮಂಗಳವಾರ ಸಿಸಿಬಿ ಪೊಲೀಸರು ಉಡುಪಿಯ ಕೃಷ್ಣ ಮಠದ ಬಳಿ ವಶಕ್ಕೆ ಪಡೆದಿದ್ದಾರೆ.
ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರ ಮುಗ್ಧತೆಯನ್ನು ಬಳಸಿಕೊಂಡ ಚೈತ್ರಾ, ನಾಲ್ಕೈದು ಜನರ ತಂಡದ ಮೂಲಕ ನಕಲಿ ಬಿಜೆಪಿ- ಆರೆಸ್ಸೆಸ್ ನಾಯಕರನ್ನು ಸೃಷ್ಟಿ ಮಾಡಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೂರು ಹಂತಗಳಲ್ಲಿ ಏಳು ಕೋಟಿ ರೂಪಾಯಿ ಹಣ ಪೀಕಿದ್ದಾರೆ ಎಂದು ಆರೋಪಿಸಲಾಗಿದೆ.
ಸಲೂನ್ ಕೆಲಸಗಾರರು, ಕಬಾಬ್ ಮಾರುವವನ ಮೂಲಕ ವಂಚನೆ!
ಉದ್ಯಮಿಗೆ ವಂಚಿಸಲು ನಕಲಿ ಬಿಜೆಪಿ-ಆರ್ಎಸ್ಎಸ್ ನಾಯಕರನ್ನು ಚೈತ್ರಾ ಅಂಡ್ ಟೀಂ ಸೃಷ್ಟಿಸಿದ್ದರು ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಹಾಗೂ ಧನರಾಜ್ ಎಂಬವರನ್ನು ಆರೆಸ್ಸೆಸ್ ಪ್ರಚಾರಕರು ಮತ್ತು ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಉದ್ಯಮಿಗೆ ಪರಿಚಯಿಸಿದ್ದಳು ಎನ್ನಲಾಗಿದೆ.
ಬೈಂದೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದ ಬಾಬು ಪೂಜಾರಿ ಮುಂದೆ ಹೇಗೆ ನಟಿಸಬೇಕು ಎಎಂದು ಮೊದಲೇ ಸೂಚನೆ ನೀಡಿದ್ದ ಚೀತ್ರಾ, ನಕಲಿ ಬಿಜೆಪಿ-ಆರೆಸ್ಸೆಸ್ ನಾಯಕರಿಗೆ ಕಡೂರಿನ ಮನೆಯೊಂದರಲ್ಲಿ ತರಬೇತಿ ನೀಡಿದ್ದರು ಎನ್ನಲಾಗಿದೆ. ಆರೆಸ್ಸೆಸ್ ಹೆಸರಿನ ಕಾರು ಬಳಕೆಗೆ ಚೈತ್ರಾ ಉದ್ಯಮಿಯಿಂದ 2 ಲಕ್ಷ ರೂಪಾಯಿ ಕಿತ್ತಿದ್ದರು. ಈ ಕೆಲಸಕ್ಕೆ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ವ್ಯಕ್ತಿಗೆ ಚೈತ್ರಾ ಮತ್ತು ಗಗನ್ 93 ಸಾವಿರ ರೂಪಾಯಿ ಹಾಗೂ ಸಲೂನ್ ಕೆಲಸಗಾರರಾದ ಗಗನ್ ಮತ್ತು ಧನರಾಜ್ ಎಂಬವರಿಗೆ ತಲಾ 1.20 ಲಕ್ಷ ರೂಪಾಯಿ ಕೊಟ್ಟಿದ್ದರು ಎಂದು ಹೇಳಲಾಗ್ತಿದೆ.


ಇದನ್ನೂ ಓದಿ : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ : ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ
ರಮೇಶ್ ಎಂಬಾತನಿಗೆ ಆರೆಸ್ಸೆಸ್ ಪ್ರಚಾರಕ ವಿಶ್ವನಾಥ್ ಜೀ ಹೆಸರಿನ ಪಾತ್ರ ನೀಡಲಾಗಿತ್ತು. ಟಿಕೆಟ್ ತಪ್ಪಿದಾಗ ಹಣವನ್ನು ವಿಶ್ವನಾಥ್ ಜಿಗೆ ತಲುಪಿಸಿದ್ದಾಗಿ ಹೇಳಿದ್ದ ಚೈತ್ರಾ, ತಾನೂ ಸಹ ಅವರಿಂದ ಮೋಸ ಹೋಗಿದ್ದೇನೆ ಎಂದು ಉದ್ಯಮಿ ಮುಂದೆ ನಾಟಕವಾಡಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಜೊತೆಗೆ ಗಗನ್ ಕಡೂರು, ಪ್ರಸಾದ್, ಶ್ರೀಕಾಂತ್ ನಾಯಕ್ ಪೆಲತ್ತೂರು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಇದುವರೆಗೆ ವಶಕ್ಕೆ ಪಡೆದಿದ್ದಾರೆ. ಪ್ರಜ್ವಲ್ ಶೆಟ್ಟಿ ಆರ್.ಎಸ್ ಧನರಾಜ್ ಎಂಬವರ ಹೆಸರೂ ಕೇಳಿ ಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.