ಹಾಸನ: ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ. ಹಾಸನ ಜಿಲ್ಲೆ ಪ್ರವಾಸದ ಬಳಿಕ ರಾಜ್ಯ ಪ್ರವಾಸವನ್ನು ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಇಂದು ಕಡೆ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರು ದೇವೇಶ್ವರನ ಪೂಜೆಗೆ ಆಗಮಿಸಿದ್ದೇನೆ, ರಾಜ್ಯವನ್ನ ಮರೆಯೊದಿಲ್ಲ, ಪ್ರವಾಸ ಮುಗಿಸಿ ಪಾರ್ಲಿಮೆಂಟ್ಗೂ ಹೋಗುತ್ತೇನೆ ಎಂದರು. ಜಿಲ್ಲೆಯಲ್ಲಿ ಮುಂದಿನ ವಾರ ಪ್ರವಾಸ ಮಾಡುತ್ತೇನೆ. ಹಾಸನದ ಪ್ರತಿ ಕ್ಷೇತ್ರದಲ್ಲೂ ಒಂದೊಂದು ದಿನ ಪ್ರವಾಸ ಮಾಡುತ್ತೇನೆ ಎಂದರು.
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಆಮಂತ್ರಣ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಚಾರದಲ್ಲಿ ಏನೂ ಮಾತನಾಡಲ್ಲ, ಯಾರ್ಯಾರು ಏನೇನು ಮಾಡಿದರು ಎಂದು ವಿಶ್ಲೇಷಣೆ ಮಾಡಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.