ನವದೆಹಲಿ: ಲೋಕ ಜನಶಕ್ತಿ ಪಕ್ಷದ ಮಾಜಿ ಮುಖ್ಯಸ್ಥ, ದಿವಂಗತ ಸಹೋದರ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ‘ಉತ್ತರಾಧಿಕಾರಿ’ ನಾನೇ ಎಂದು ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ ಅವರು ಪ್ರತಿಪಾದಿಸಿದ್ದಾರೆ. ಆದರೆ, ‘ಚಿರಾಗ್ ಪಾಸ್ವಾನ್ ಅವರು ಕಾನೂನಿನ ಪ್ರಕಾರ ಅವರ ತಂದೆಯ ಹಣಕಾಸಿನ ಆಸ್ತಿಯನ್ನು ಮಾತ್ರ ಪಡೆದುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್, ದೇಶಕಂಡ ಹಿರಿಯ ದಲಿತ ನಾಯಕ. ಬಿಹಾರದ ಧೀಮಂತ ರಾಜಕಾರಣಿ. ಎನ್ಡಿಎ ಭಾಗವಾಗಿದ್ದ ಅವರು, ಕೇಂದ್ರ ಸಚಿವರಾಗಿದ್ದಾಗಲೇ ದೀರ್ಘಕಾಲದ ಅನಾರೋಗ್ಯದ ಕಾರಣದಿಂದ 2020ರ ಅಕ್ಟೋಬರ್ನಲ್ಲಿ ನಿಧನರಾದರು. ಅವರ ಮಗ ಚಿರಾಗ್ ಪಾಸ್ವಾನ್ ಮತ್ತು ಕಿರಿಯ ಸಹೋದರ ಪರಸ್ ನಡುವಿನ ಭಿನ್ನಾಭಿಪ್ರಾಯಗಳಿಂದ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಲೋಕ ಜನಶಕ್ತಿ ಪಕ್ಷ (LJP) ಎರಡು ಬಣಗಳಾಗಿ ವಿಭಜನೆಯಾಯಿತು.
ಇದನ್ನೂ ಓದಿ; ಚಂದ್ರನ ಮೇಲೆ ನಡೆದಾಡಿದ ಭಾರತ: ಇಸ್ರೋ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪರಸ್, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಹಾಜಿಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೊಷಿಸಿದರು. ರಾಮ್ ವಿಲಾಸ್ ಪಾಸ್ವಾನ್ ಅವರು 2019 ರಲ್ಲೂ ಇದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನ್ನನ್ನು ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ.
ಪಾಸ್ವಾನ್ ಅವರ ಪರಂಪರೆಯನ್ನು ಮುಂದುವರಿಸಲು; ಅವರ ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸುವಂತೆ ನನ್ನನ್ನು ಕೇಳಿಕೊಂಡರು. ಕಾನೂನಿನ ಪ್ರಕಾರ, ಚಿರಾಗ್ ಪಾಸ್ವಾನ್ ರಾಮ್ ವಿಲಾಸ್ ಪಾಸ್ವಾನ್ ಅವರ ಆಸ್ತಿಯ ಉತ್ತರಾಧಿಕಾರಿ. ಆದರೆ, ರಾಮಾಯಣದಲ್ಲಿ ಶ್ರೀರಾಮನ ಸಹೋದರ ಲಕ್ಷ್ಮಣನಂತೆ ನಾನು ನನ್ನ ಅಣ್ಣನ ರಾಜಕೀಯ ವಾರಸುದಾರನಾಗಿದ್ದೇನೆ. ಅವರು ರಾಜ್ಯಸಭೆಗೆ ಚುನಾಯಿತರಾದ ನಂತರ ತಮ್ಮ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನ್ನನ್ನು ಕೇಳಿದ್ದರು, ಕುಟುಂಬದ ಎಲ್ಲರಿಗಿಂತ ಹೆಚ್ಚಾಗಿ ನನ್ನನ್ನು ನಂಬುತ್ತಿದ್ದರು’ ಎಂದು ಹೇಳಿದರು.
ಇದನ್ನೂ ಓದಿ; ಇಂದು ಇಸ್ರೋ ಕಚೇರಿಗೆ ಸಿಎಂ ಭೇಟಿ
‘ಕಳೆದ ಚುನಾವಣೆಯಲ್ಲಿ ಹಾಜಿಪುರ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧನಿರಲಿಲ್ಲ. ಆದರೆ, ಪಾಸ್ವಾನ್ ನನ್ನನ್ನು ತಮ್ಮ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು’ ಎಂದು ಹೇಳಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿರಾಗ್ ಪಾಸ್ವಾನ್ ಉತ್ಸುಕರಾಗಿರುವ ಸಮಯದಲ್ಲಿ ಪರಾಸ್ ಅವರ ಈ ಹೇಳಿಕೆ ಇಬ್ಬರ ನಡುವಿನ ವಾಕಸ್ಮರಕ್ಕೆ ವೇದಿಕೆ ಕಲ್ಪಸಿಸಲಿದೆ ಎನ್ನಲಾಗಿದೆ. ಪಾಸ್ವಾನ್ ನಿಧನದ ನಂತರ ಎಲ್ಜಿಪಿಯಿಂದ ಇಬ್ಭಾಗವಾಗಿರುವ ಎಲ್ಜೆಪಿ (ರಾಮ್ ವಿಲಾಸ್) ಮತ್ತು ಆರ್ಎಲ್ಜೆಪಿ ಎರಡೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಭಾಗವಾಗಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.