ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಇದೇ ತಾಲೂಕಿನ ಪೆರೆಸಂದ್ರ ಗ್ರಾಮದವರು. 1985 ರಲ್ಲಿ ಜನಿಸಿದ ಇವರು ಮೊದಲ ಭಾರಿಗೆ ಶಾಸಕರಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದು, ಶಾಸಕರಾಗುವುದಕ್ಕೂ ಮೊದಲಿ ಅವರು ಪರಿಶ್ರಮ ನೀಟ್ ಅಕಾಡೆಮಿ ಮೂಲಕ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ತರಬೇತಿ ನೀಡುತ್ತಿದ್ದರು. ಜತೆಗೆ, ಪ್ರೇರಕ ಭಾಷಣಗಳನ್ನು (Motivational speech) ಮಾಡುವ ಅವರು, ವಿದ್ಯಾರ್ಥಿಗಳಿಗಾಗಿ ಕೆಲ ಪುಸ್ತಕಗಳನ್ನು ಬರೆದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಪೆರೆಸಂದ್ರ ಗ್ರಾಮದ ಈಶ್ವರಪ್ಪ ಮತ್ತು ಮಂಜುಳಮ್ಮನವರ ಮಗ ಪ್ರದೀಪ್ ಈಶ್ವರ್ (Pradeep Eshwar Iyer) 1985ರಲ್ಲಿ ಜನಿಸಿದ್ದು.. ಚಿಕ್ಕ ವಯಸ್ಸಿನಲ್ಲೆ ತಂದೆ ತಾಯಿಯನ್ನು ಕಳೆದುಕೊಂಡರು. ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದು ಪೆರೆಸಂದ್ರ ಗ್ರಾಮದ ಸರ್ಕಾರಿ ಶಾಲೆ ಹಾಗೂ ತುಮಕೂರಿನ ಸಿದ್ಧಗಂಗಾ ಮಠದದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದರು. ನಂತರ, ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ರು… ವಿದ್ಯೆಯ ಮೇಲೆ ಬಹಳ ಆಸಕ್ತಿ ಇದ್ದಿದ್ದನ್ನು ಕಂಡ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಎಂ. ವೆಂಕಟೇಶ್ ಅವರು ಪ್ರದೀಪ್ ಈಶ್ವರ್ ಅವರಿಗೆ ಪ್ರಥಮ ಪಿಯುಸಿ ವಿಧ್ಯಾರ್ಥಿಗಳಿಗೆ ಪಾಠ ಮಾಡಲು ಅವಕಾಶ ಮಾಡಿಕೊಟ್ಟರು. ಅದಿನಿಂದ ಅವರ ಮುಂದಿನ ವಿಧ್ಯಾಭ್ಯಾಸ ಮೊಟುಕುಗೊಳಿಸಿ ಪಾಠದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ, ಡಾಕ್ಟರ್ ಆಗಬೇಕೆಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುರುವಾಗಿದ್ದಾರೆ.
ತಂದೆ-ತಾಯಿ ಕಳೆದುಕೊಂಡು ಒಂದೊತ್ತಿನ ಊಟಕ್ಕೂ ಪರಡಾಡುತ್ತಿದ್ದ ಪ್ರದೀಪ್ ಈಶ್ವರ್, ಎರಡು ಮೂರು ಕಾಲೇಜುಗಳಿಗೆ ತೆರಳಿ ಪಾಠ ಮಾಡಿ ಸಂಜೆ ಟ್ಯೂಷನ್ ಮಾಡಿ ಒಬ್ಬರೆ ರೂಂನಲ್ಲಿ ಜೀವನ ಸಾಗಿಸುತ್ತಿದ್ರು.. ಚಿಕ್ಕಬಳ್ಳಾಪುರ ಸ್ಥಳೀಯ ವಾಹಿನಿಯಲ್ಲಿ ‘ಲೈಪ್ ಇಸ್ ಬ್ಯೂಟಿಫುಲ್’ ಎಂಬ ಕಾರ್ಯಕ್ರಮದಿಂದ ಜನತೆಗೆ ಪರಿಚಯವಾದರು. (ಅದೇ ಹೆಸರಿನಲ್ಲಿ ಒಂದು ಪುಸ್ತಕ ಬರೆದಿದ್ದಾರೆ). ಶಾಸಕನಾಗುವುದಕ್ಕೂ ಮೊದಲು ಮತ್ತು ಚುನಾವಣೆ ಪ್ರಚಾರದಲ್ಲಿ ತಮ್ಮ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆ ದಾಟಿ ರಾಜ್ಯದ ಜನರ ಮೆಚ್ಚುಗೆ ಪಡೆದು ಜನಪ್ರಿಯರಾಗಿದ್ದಾರೆ.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಕೆ. ಸುಧಾಕರ್ ವಿರುದ್ಧ ಅವರು ಮಾಡಿರುವ ಆಕ್ರಮಗಳ ಬಗ್ಗೆ ಹೋರಾಟ ನಡೆಸಿದ್ದ ಪ್ರದೀಪ್ ಮೇಲೆ 24 ಕೇಸುಗಳು ದಾಖಲಾಗಿವೆ. ಆ ನಂತರ ಅವರು ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರು ಸೇರಿಕೊಂಡು ಪರಿಶ್ರಮ ನೀಟ್ ಆಕಾಡೆಮಿ ಸಂಸ್ಥೆ ಕಟ್ಟಿ ಬೆಳೆದ್ರು. ನಂತರ ಚಿಕ್ಕಬಳ್ಳಾಪುರದಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ಮಾಡಿಕೊಂಡು ಬಂದು 2023ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕಿತು. 11 ಸಾವಿರ ಮತಗಳ ಅಂತರದಿಂದ ಅಂದಿನ ಮೆಡಿಕಲ್ ಮಿನಿಸ್ಟರ್ ಸುಧಾಕರ್ ವಿರುದ್ಧ ಗೆದ್ದು ಬೀಗಿದ್ದಾರೆ ಈ ಮೆಡಿಕಲ್ ಮೇಷ್ಟ್ರು.
ವೃತ್ತಿ ಜೀವನ
ಚಿಕ್ಕಬಳ್ಳಾಪುರದಲ್ಲೇ ಇದ್ದುಕೊಂಡು ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಪ್ರದೀಪ್ ಈಶ್ವರ್, 2018ರಲ್ಲಿ ಪರಿಶ್ರಮ ನೀಟ್ ಅಕಾಡೆಮಿಯನ್ನು ಸ್ಥಾಪಿಸಿದರು. ಜೀವಶಾಸ್ತ್ರ ವಿಷಯವನ್ನು ಕಲಿಸುವ ಇವರು, ಇತರ ಉಪನ್ಯಾಸಕರೊಂದಿಗೆ, ಬೆಂಗಳೂರಿನಲ್ಲಿ ನೀಟ್ ಅಕಾಡೆಮಿ ನಡೆಸುತ್ತಿದ್ದಾರೆ.
ರಾಜಕೀಯ ಜೀವನ
ಹಿಂದುಳಿದ ಬಲಿಜ ಸಮುದಾಯದವರಾದ ಪ್ರದೀಪ್ ಈಶ್ವರ್, 2016ರಲ್ಲಿ ದೇವನಹಳ್ಳಿ ಸಮೀಪದ ವಿಜಯಪುರವನ್ನು ತಾಲೂಕು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೆ, ಅದು ವಿಫಲವಾಯಿತು. ಬಳಿಕ ಅವರು ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ನಿರೂಪಕರಾದರು. 2018ರಲ್ಲಿ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ ಪ್ರದೀಪ್ ಈಶ್ವರ್, ವಿಧಾನಸಭಾ ಚುನಾವಣೆಯಲ್ಲಿ ಅಂದು ಶಾಸಕರಾಗಿದ್ದ ಡಾ. ಕೆ ಸುಧಾಕರ್ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ ವಿ ನವೀನ್ ಕಿರಣ್ ಪರ ಭರ್ಜರಿ ಪ್ರಚಾರ ಮಾಡಿ ಗಮನಸೆಳೆದಿದ್ದರು.
ಸುಧಾಕರ್ ವಿರುದ್ಧ ನೇರವಾಗಿ ಹಲವು ಆರೋಪಗಳನ್ನು ಮಾಡಿದ್ದರು. ಆ ಚುನಾವಣೆಯಲ್ಲಿ ಸುಧಾಕರ್ ಗೆಲುವು ಸಾಧಿಸಿದ್ದರು. ಬಳಿಕ, 2023ರ ವಿಧಾನಸಭಾ ಚುನಾವಣೆಯಲ್ಲಿ ತಾವೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದ ಪ್ರದೀಪ್, ಹಿಂದಿನ ಆಡಳಿತ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.