ಬೆಂಗಳೂರು: ಇಂದು ಬಸವನಗುಡಿಯ ನೂತನ ಜೆಡಿಎಸ್ ಕಚೇರಿ ಉದ್ಘಾಟನೆ ಮಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಮೊದಲ ಜೆಡಿಎಸ್ ಅಭ್ಯರ್ಥಿಯನ್ನ ಘೋಷಣೆ ಮಾಡಿದ್ರು.
ಮೊದಲಿಗೆ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ನಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಕುಮಾರಸ್ವಾಮಿ, ನಂತರ ನೂತನ ಜೆಡಿಎಸ್ ಕಚೇರಿಯನ್ನ ಉದ್ಘಾಟನೆ ಮಾಡಿ, 2023 ವಿಧಾನಸಭಾ ಚುನಾವಣೆಗೆ ಬಸವನಗುಡಿ ಕ್ಷೇತ್ರದಿಂದ ಸಮಾಜ ಸೇವಕರಾದ ಅರಮನೆ ಶಂಕರ್ ಅವರ ಹೆಸರನ್ನ ಘೋಷಣೆ ಮಾಡಿದ್ರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನಿಂದ ನಮ್ಮ ಬೆಂಗಳೂರಿನ ಮೊಟ್ಟ ಮೊದಲ ಅಭ್ಯರ್ಥಿಯ ಅರಮನೆ ಶಂಕರ್ ಅವರ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದರು. ಇನ್ನು ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ನಾಡಪ್ರಭು ಕೆಂಪೇಗೌಡರ ಹೆಸರನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಜನರು ಕೂಡ ನೋಡುತ್ತಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಿ ಒಕ್ಕಲಿಗರ ಮತ ಸೆಳೆಯಬಹುದು ಎಂದು ಬಿಜೆಪಿಯವರು ಲೆಕ್ಕಾಚಾರ ಮಾಡಿದ್ದಾರೆ. ಬಿಜೆಪಿ ನಾಯಕರು ಆ ರೀತಿ ಭ್ರಮೆಯಲ್ಲಿದ್ದರೆ ಜನರೇ ಆ ಭ್ರಮೆಯಿಂದ ಹೊರ ತರುತ್ತಾರೆ. ಕೆಂಪೇಗೌಡ ಪ್ರತಿಮೆ ಅನಾವರಣ ಬಿಜೆಪಿ ಸರ್ಕಾರದ ನಿಯೋಜಿತ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ, ಹೋಗುತ್ತಾರೆ ಅಷ್ಟೇ. ಇದಕ್ಕೆ ನಾನು ಹೆಚ್ಚು ಮಹತ್ವ ಕೊಡಲು ಹೋಗುವುದಿಲ್ಲ. ಬೆಂಗಳೂರು ದೊಡ್ಡಮಟ್ಟದಲ್ಲಿ ಬೆಳೆದಿದೆ. ಅದೇ ರೀತಿ ನಿರುದ್ಯೋಗ ಸಮಸ್ಯೆ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತಾವಧಿಯಲ್ಲಿ ಬೆಂಗಳೂರಲ್ಲಿ ಹಲವಾರು ರೀತಿಯ ಅನಾಹುತ ಮಾಡಿದ್ದಾರೆ. ಅದನ್ನು ಸರಿಪಡಿಸುವ ಮೂಲಕ ಕೆಂಪೇಗೌಡರಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದರು.